ಶಿರ್ವ ಮಹ್ಮೂದ್ ಹಸನ್
ಉಡುಪಿ, ಜ.22: ಮೂಲತಃ ಶಿರ್ವದವರಾದ ಹಾಲಿ ಮುಂಬೈ ನಿವಾಸಿ, ಉದ್ಯಮಿ ಶಿರ್ವ ಮಹ್ಮೂದ್ ಹಸನ್ ಅವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ತಡರಾತ್ರಿ ಮುಂಬೈಯಲ್ಲಿ ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಆಟೋಮೊಬೈಲ್ ಕ್ಷೇತ್ರದಲ್ಲಿ ಉದ್ಯಮಿಯಾಗಿದ್ದ ಮಹ್ಮೂದ್ ಅವರು ಕಠಿಣ ಪರಿಶ್ರಮಿ ಹಾಗೂ ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದರು. ಕೊಡುಗೈ ದಾನಿಯಾಗಿದ್ದ ಅವರು ಧಾರ್ಮಿಕ, ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದರು. ಶಿರ್ವ ಸುನ್ನಿ ಜುಮಾ ಮಸೀದಿಯ ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಬುಧವಾರ ವಿಮಾನದ ಮೂಲಕ ಅವರ ಮೃತದೇಹವನ್ನು ಉಡುಪಿಗೆ ತಂದು ಅಜ್ಜರಕಾಡಿನ ಅವರ ನಿವಾಸದಲ್ಲಿ ಮಗ್ರಿಬ್ ನಮಾಝ್ ವರೆಗೆ ಇರಿಸಲಾಗುವುದು. ಬಳಿಕ ಶಿರ್ವಕ್ಕೆ ಕೊಂಡೊಯ್ದು ಇಶಾ ನಮಾಝ್ ಬಳಿಕ ಅಲ್ಲಿನ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಮೃತರ ಷಡ್ಡಗ ಬ್ಯಾರೀಸ್ ಗ್ರೂಪ್ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಬ್ಯಾರಿ ತಿಳಿಸಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.