ಶ್ರೀಶದಾಸ್
ಉಡುಪಿ, ಮಾ.30: ಖ್ಯಾತ ಹರಿಕಥಾ ವಿದ್ವಾಂಸ, ಯಕ್ಷಗಾನ ಕಲಾವಿದ, ಸಂಗೀತ ಕಲಾವಿದ ಉಡುಪಿಯ ಆರ್.ಶ್ರೀಶದಾಸ್ ಯಾನೆ ಕೆ.ರಾಘವೇಂದ್ರ ಭಟ್ ಅವರು ಶಿವಳ್ಳಿ ಗ್ರಾಮದ ಕರಂಬಳ್ಳಿಯ ತಮ್ಮ ಸ್ವಗೃಹದಲ್ಲಿ ರವಿವಾರ ಅಪರಾಹ್ನ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಸುಮಾರು ಆರು ದಶಕಗಳ ಕಾಲ ಹರಿಕಥಾ ಪರಂಪರೆಯನ್ನು ಮುಂದುವರಿಸಿ ಕೊಂಡು ಬಂದಿದ್ದ ಇವರು ನಾಡಿನ ಪ್ರಸಿದ್ಧ ಹರಿಕಥಾ ಕಲಾವಿದರಾದ್ದರು. ರಾಜ್ಯದೊಳಗೆ ಮಾತ್ರವಲ್ಲದೇ, ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಅವರು ಹರಿಕಥೆಯನ್ನು ಜನಪ್ರಿಯಗೊಳಿಸಿದ್ದರು. ಅಖಿಲ ಕರ್ನಾಟಕ ಹರಿದಾಸರ ಹರಿಕಥಾ ಮೇಳ ಸ್ಪರ್ಧೆಯಲ್ಲಿ ಭಾಗಹಿಸಿ ಪ್ರಥಮ ಬಹುಮಾನದೊಂದಿಗೆ ಚಿನ್ನದ ಪದಕ ಪಡೆದಿದ್ದರು. ತಮ್ಮ 24ನೆ ವಯಸ್ಸಿನಿಂದ ಆರಂಭಿಸಿ ತನ್ನ ಇಳಿವಯಸ್ಸಿನಲ್ಲೂ ಹರಿಕಥಾ ಪಾರಾಯಣ ಮಾಡಿದ್ದರು.
ಅಲ್ಲದೇ ಇವರು ತಬಲ, ಮೃದಂಗವಾದನದಲ್ಲೂ ಪರಿಣಿತಿ ಪಡೆದಿದ್ದು, ಸರಸ್ವತಿ ಸಂಗೀತ ಶಾಲೆ ಸ್ಥಾಪಿಸಿ 3000 ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ಸಂಗೀತ, ಹಾರ್ಮೋನಿಯಂ,ಮೃದಂಗ, ಕೊಳಲು ಮುಂತಾದ ಸಂಗೀತ ಕಲೆಯನ್ನು ಕಲಿಸಿದ್ದರು. ಶ್ರೀಶದಾಸರಿಗೆ 2018ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿತ್ತು. ಇವರು ಪತ್ನಿ, ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.