ಇಂತಹ ಮುಷ್ಕರ ಬೇಕಿತ್ತೇ?
ಮಾನ್ಯರೆ,
ರಾಜ್ಯ ಸರಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನಿಯಂತ್ರಿಸಲಿರುವ ಕೆಪಿಎಂಇ ಕಾಯ್ದೆಯನ್ನು ವಿರೋಧಿಸಿ ಖಾಸಗಿ ವೈದ್ಯರು ಮಾಡುತ್ತಿರುವ ಮುಷ್ಕರದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾವು ನೋವುಗಳು ಸಂಭವಿಸಿದ್ದು ವೃದ್ಧರು, ಗರ್ಭಿಣಿಯರು, ಚಿಕ್ಕ ಮಕ್ಕಳು ಸೇರಿದಂತೆ ಇತರ ರೋಗಿಗಳು ಸೂಕ್ತ ಹಾಗೂ ಸಕಾಲಿಕ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ. ‘ಗಂಡ ಹೆಂಡತಿಯ ನಡುವೆ ಕೂಸು ಬಡವಾಯಿತು’ ಎನ್ನುವಂತೆ ವೈದ್ಯರು ಮತ್ತು ಸರಕಾರದ ಹಗ್ಗಜಗ್ಗಾಟದಲ್ಲಿ ಸುಮಾರು 30ಕ್ಕಿಂತ ಹೆಚ್ಚು ಅಮಾಯಕ ಬಡರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಂಡಿದ್ದಾರೆೆ. ಇದು ವಿಷಾದಕರ ಮತ್ತು ಖಂಡನೀಯ.
ರೋಗಿಗಳ ಅತ್ಯಮೂಲ್ಯ ಜೀವ ಕಾಪಾಡಬೇಕಾದ ವೈದ್ಯರು ಸ್ವಲ್ಪವೂ ಮಾನವೀಯತೆ ಇಲ್ಲದಂತೆ ವರ್ತಿ ಸುತ್ತಿದ್ದು, ತಮ್ಮ ಪವಿತ್ರ ವೈದ್ಯ ವೃತ್ತಿಗೆ ನಂಬಿಕೆ ದ್ರೋಹ ಬಗೆದಿದ್ದಾರೆ. ಬಡ ಜನರ ಪ್ರಾಣಕ್ಕಿಂತ ಅವರಿಗೆ ಮುಷ್ಕರ ಹೆಚ್ಚಾಯಿತೇ? ಸಮಸ್ಯೆ ಬಗೆಹರಿಸಿಕೊಳ್ಳಲು ಸಾಕಷ್ಟು ದಾರಿಗಳಿವೆ. ಅದನ್ನು ಬಿಟ್ಟು ಬೀದಿಗಿಳಿದು ಹೋರಾಟ ಮಾಡಿದರೆ ಹೋದ ರೋಗಿಯ ಜೀವ ಮತ್ತೆ ತರಲು ಸಾಧ್ಯವಾಗಬಹುದೇ? ಈ ನಿಮ್ಮ ಸ್ವಾರ್ಥ ಸಾಧನೆಗೆ ಇನ್ನೆಷ್ಟು ಹಸುಗೂಸುಗಳು, ಗರ್ಭಿಣಿಯರು, ವೃದ್ಧರು ಬಲಿಯಾಗಬೇಕು? ನಿಮ್ಮ ಪ್ರತಿಷ್ಠೆಗೆ ರೋಗಿಗಳ ಬದುಕಿನ ಜೊತೆಗೆ ಆಟ ಆಡುವುದು ಸರಿಯಲ್ಲ. ಆದ್ದರಿಂದ ಮಾನವೀಯತೆಯ ದೃಷ್ಟಿಯಿಂದ ಈ ಸಮಸ್ಯೆಯನ್ನು ಕ್ಷಿಪ್ರವಾಗಿ ಇತ್ಯರ್ಥ ಮಾಡಿಕೊಂಡು ಹೋಗುತ್ತಿರುವ ಬಡ ರೋಗಿಗಳ ಜೀವ ಉಳಿಸಿ.