ಪೊಲೀಸರಿಗೇ ರೌಡಿಗಳ ಭಯ!
ಮಾನ್ಯರೇ,
ಕರ್ತವ್ಯ ನಿಷ್ಠೆಯಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಗಲುರಾತ್ರಿ ಎನ್ನದೆ ದಿನದ ಇಪ್ಪತ್ನಾಲ್ಕು ಘಂಟೆಯೂ ನಿರಂತರವಾಗಿ ಸೇವೆಗೈಯುತ ಸಮಾಜದಲ್ಲಿನ ಆಸ್ತಿ ಪಾಸ್ತಿಯನ್ನು ಸಂರಕ್ಷಣೆಯ ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತಿದೆೆ. ಕೆಲವೊಮ್ಮೆ ಅಪರಾಧಿಗಳನ್ನು ಹಿಡಿಯಲು ತಮ್ಮ ಪ್ರಾಣದ ಹಂಗು ತೊರೆದು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ ಕೀರ್ತಿ ನಮ್ಮ ರಾಜ್ಯ ಪೊಲೀಸರಿಗಿದೆ. ಹೀಗಿರುವಾಗ ಇತ್ತೀಚೆಗೆ ರಾಜಧಾನಿ ಬೆಂಗಳೂರಿನಲ್ಲಿ ಕೆಲವು ಹೊರ ರಾಜ್ಯದ ಹಾಗೂ ವಿದೇಶಿ ಪುಂಡ ಪೋಕರಿ ಪುಡಿ ರೌಡಿಗಳು ಮದ್ಯ ಮತ್ತು ಮಾದಕ ಸೇವನೆಯ ಮತ್ತಿನಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿ ಮತ್ತು ಪೇದೆಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದು ಖಂಡನೀಯ. ಕಳೆದ ಹದಿನೈದು ದಿನಗಳಲ್ಲಿ ಎಂಟು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ಮಾಡಿರುವ ಪ್ರಕರಣ ನಾಗರಿಕ ಸಮಾಜ ಭಯ ಪಡುವಂತೆ ಮಾಡಿದೆ.
ಆದ್ದರಿಂದ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಹೊರ ರಾಜ್ಯ ಹಾಗೂ ವಿದೇಶಿಗರ ಅಟ್ಟಹಾಸ ಮಟ್ಟ ಹಾಕಲು ಕಠಿಣ ಕಾನೂನು ಕ್ರಮಗಳನ್ನು ರೂಪಿಸಬೇಕಾಗಿದೆ. ಪೊಲೀಸ್ ಅಧಿಕಾರಿ ಮತ್ತು ಪೇದೆಗಳ ಆತ್ಮರಕ್ಷಣೆಗೆ ಇಲಾಖೆಗೆ ಹೊಸ ಕಾನೂನು ಅಸ್ತ್ರ ರೂಪಿಸಬೇಕಾಗಿದೆ.
-ಎಂ. ಕೆ. ಬೋರಗಿ, ಸಿಂದಗಿ