"ಕೆಎಸ್ಸಾರ್ಟಿಸಿ ಬಸ್ಸುಗಳು ಅವೈಜ್ಞಾನಿಕ ಸ್ಪರ್ಧೆ ನೀಡುತ್ತಿವೆ" ಅಂದರೆ ಏನರ್ಥ ?
# ಖಾಸಗಿ ಬಸ್ ಲಾಬಿಗಳ ಅರ್ಥರಹಿತ ಬೇಡಿಕೆಗಳು
ಮೊನ್ನೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಖಾಸಗಿ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದು ವಿಚಿತ್ರ ಆರೋಪವೊಂದನ್ನು ಹೊರಿಸಿದರು. ಅದೇನೆಂದರೆ "ಕೆಎಸ್ಸಾರ್ಟಿಸಿ ಬಸ್ಸುಗಳು ಅವೈಜ್ಞಾನಿಕ ಸ್ಪರ್ಧೆ ನೀಡುತ್ತಿವೆ" ಇವರ ಮಾತಿನ ಅರ್ಥ ಮತ್ತು ಉದ್ದೇಶವೇನು?
"ನಾವು ಪ್ರಯಾಣಿಕರನ್ನು ಸುಲಿಗೆ ಮಾಡುತ್ತೇವೆ. ನೀವೂ ಸುಲಿಗೆ ಮಾಡಬೇಕು. ನೀವು ಸುಲಿಗೆ ಮಾಡದೇ ಇರುವುದರಿಂದ ನಮಗೆ ಸುಲಿಗೆಗೈಯಲು ಕಷ್ಟವಾಗುತ್ತಿದೆ" ಎಂದೇ?
ನಾನು (ಲೇಖಕ) ಒಂದು ಪುಟ್ಟ ಖಾಸಗಿ ವೈದ್ಯಕೀಯ ಸಂಸ್ಥೆಯೊಂದನ್ನು ನಡೆಸುತ್ತಿದ್ದೇನೆ. ನನ್ನ ಸಂಸ್ಥೆಯ ಅಕ್ಕಪಕ್ಕ ಸರಕಾರಿ ಆಸ್ಪತ್ರೆಗಳಿವೆ. ಸರಕಾರಿ ಆಸ್ಪತ್ರೆಗಳು ಉಚಿತ ಸೇವೆ ನೀಡುವುದರಿಂದ ನನಗೆ ಅವೈಜ್ಞಾನಿಕ ಸ್ಪರ್ಧೆ ಎದುರಾಗುತ್ತಿದೆ ಎಂದರೆ ಏನರ್ಥ? ಒಟ್ಟಿನಲ್ಲಿ ಸರಕಾರ ಜನತೆಗೆ ಉಪಯೋಗವಾಗುವ ಯಾವುದೇ ಯೋಜನೆಯನ್ನು ಜಾರಿಗೆ ತರಬಾರದೆಂದು ಖಾಸಗಿ ಬಸ್ ಮಾಲಕರ ಬೇಡಿಕೆಯೇ?
ಇವರು ಹೇಳುತ್ತಾರೆ " ನಾವು ಹಲವಾರು ವರ್ಷಗಳಿಂದ ಜನರಿಗೆ ಸೇವೆ ನೀಡುತ್ತಾ ಬಂದಿದ್ದೇವೆ" ಇವರೇನು ಜನರನ್ನು ಪುಕ್ಸಟ್ಟೆಯಾಗಿ ಇವರ ಬಸ್ಸಲ್ಲಿ ಕೊಂಡೊಯ್ದಿದ್ದಾರಾ? ಈ ವರೆಗೆ ಖಾಸಗಿ ಬಸ್ ಲಾಬಿಗಳು ಕುಂಟು ನೆಪಗಳನ್ನು ಮುಂದಿಟ್ಟು ದರ ಏರಿಕೆ ಮಾಡುತ್ತಿದ್ದವು. ಈಗ ಅದೂ ಸಾಲದೆಂಬಂತೆ ಸರಕಾರಿ ಬಸ್ಸುಗಳ ಪ್ರಯಾಣ ದರವೂ ಇವರ ಮೂಗಿನ ನೇರಕ್ಕೆ ಇರಬೇಕೆಂದರೆ ಏನರ್ಥ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದಿನಿಂದಲೂ ಖಾಸಗಿ ಬಸ್ಸುಗಳದ್ದೇ ಪಾರಮ್ಯ. ಎಲ್ಲಾದರೂ ಹೊಸದಾಗಿ ಸರಕಾರಿ ಬಸ್ಸುಗಳನ್ನು ಹಾಕಿದರೆ ಏನಾದರೂ ಮಾಡಿ ಅದನ್ನು ತಡೆಯುವ ಕಸರತ್ತನ್ನು ಖಾಸಗಿ ಬಸ್ ಲಾಬಿಗಳು ಮಾಡುತ್ತಾ ಬಂದಿರುವುದು ಗುಟ್ಟಾಗಿರುವ ವಿಚಾರವೇನಲ್ಲ. ಖಾಸಗಿ ಬಸ್ ಲಾಬಿಗಳ ಕಸರತ್ತಿಗೆ ಒಂದೆರಡು ಉದಾಹರಣೆಗಳನ್ನು ನೀಡುತ್ತೇನೆ. ಸುಮಾರು ಎಂಟು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನಿಂದ ಕೊಣಾಜೆ ಮಾರ್ಗವಾಗಿ ಮಂಗಳೂರಿಗೆ ಎರಡು ಸರಕಾರಿ ಬಸ್ಸುಗಳನ್ನು ಹಾಕಲಾಗಿತ್ತು. ಆ ಬಸ್ಸುಗಳನ್ನು ಹಾಕುವಾಗಲೇ "ಕೆಎಸ್ಸಾರ್ಟಿಸಿ ಜನರ ಮುಂದೆ ಒಂದು ಶರ್ತವನ್ನಿಟ್ಟಿತ್ತು. ಈ ಎರಡು ಬಸ್ಸುಗಳು ಲಾಭದಾಯಕವಾಗಿ ನಡೆದರೆ ಹಂತಹಂತವಾಗಿ ಬಸ್ಸುಗಳ ಸಂಖ್ಯೆ ಏರಿಸಲಾಗುವುದು. ಆ ಎರಡು ಬಸ್ಸುಗಳನ್ನು ಮುಗಿಸಲು ಖಾಸಗಿ ಬಸ್ ಲಾಬಿಗಳಿಗೆ ದೊಡ್ಡ ಕೆಲಸವೇ ಆಗಲಿಲ್ಲ. ಖಾಸಗಿ ಲಾಬಿಗಳು ಆ ಎರಡೂ ಬಸ್ ಸಿಬ್ಬಂದಿಯನ್ನು ಖರೀದಿಸಿತು. ಪ್ರಯಾಣಿಕರನ್ನು ಪಿಕಪ್ ಮಾಡದೇ ಇರುವುದಕ್ಕೆ ಅವರಿಗೆ ನಿರ್ದಿಷ್ಟವಾಗಿ ಇಂತಿಷ್ಟೆಂದು ರೇಟ್ ಫಿಕ್ಸ್ ಮಾಡಿತು. ಒಂದೆಡೆ ಹೇಗಿದ್ದರೂ ಸರ್ಕಾರದ ಸಂಬಳ ಬರುತ್ತದೆ. ಇನ್ನೊಂದೆಡೆ ನಿಯಮಿತ ಆಮದನಿಯೂ ಬರುತ್ತದೆ. ಈ ಕುತಂತ್ರದ ಮೂಲಕ ಎರಡೂ ಬಸ್ಸುಗಳನ್ನು ಖಾಸಗಿ ಬಸ್ ಲಾಬಿಗಳು ಒಂದೇ ವರ್ಷದೊಳಗೆ ಮುಗಿಸಿಬಿಟ್ಟಿತು. ನೀವಿದಕ್ಕೆ ನನ್ನಲ್ಲಿ ಸಾಕ್ಷ್ಯ ಕೇಳಬಹುದು. ನನ್ನಲ್ಲಿ ನೇರ ಸಾಕ್ಷ್ಯಗಳಿಲ್ಲ, ಆದರೆ ಬಲವಾದ ಸಾಂದರ್ಭಿಕ ಸಾಕ್ಷ್ಯಗಳಿವೆ. ನಾನು ಸರಕಾರಿ ಬಸ್ಸುಗಳನ್ನು ನಿರಂತರವಾಗಿ ಗಮನಿಸತೊಡಗಿದೆ. ಸರಕಾರಿ ಬಸ್ಸುಗಳು ಸದಾ ಖಾಲಿ ಖಾಲಿ. ಆದರೆ ಅದರ ಹಿಂದೆ ಮತ್ತು ಮುಂದೆ ಚಲಿಸುವ ಖಾಸಗಿ ಬಸ್ಸುಗಳು ಸದಾ ಫುಲ್. ಕಡಿಮೆ ಟಿಕೆಟ್ ದರವಿದ್ದಾಗ್ಯೂ ಜನ ಯಾಕೆ ಸರಕಾರಿ ಬಸ್ಸು ಬಿಟ್ಟು ಖಾಸಗಿ ಬಸ್ಸುಗಳಿಗೆ ಹತ್ತುತ್ತಾರೆ?
ಇನ್ನು ಹಲವೆಡೆ ಅಧಿಕಾರಿಗಳನ್ನು ಬುಕ್ ಮಾಡಿ ಖಾಸಗಿ ಲಾಬಿಗಳು ಸರಕಾರಿ ಬಸ್ಸುಗಳ ಟೈಮಿಂಗನ್ನು ತಾವೇ ನಿರ್ಧರಿಸುತ್ತಾರೆ. ಪ್ರಯಾಣಿಕರಿಂದ ಗಿಜಿಗಿಡುವ ಬೆಳಗ್ಗಿನ ಮತ್ತು ಸಂಜೆಯ ಸಮಯದಲ್ಲಿ ಆದಷ್ಟು ಸರಕಾರಿ ಬಸ್ಸು ಸಂಚರಿಸದಂತಹ ಟೈಮಿಂಗ್ ಫಿಕ್ಸ್ ಮಾಡಿಬಿಡುತ್ತಾರೆ.
ಇತ್ತೀಚೆಗೆ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಗಡಿಪ್ರದೇಶವಾದ ಬೋಳಿಯಾರ್ ಗ್ರಾಮದ ಅಮ್ಮೆಂಬಳ ಎಂಬ ಹಳ್ಳಿಯೊಂದಕ್ಕೆ ಸರಕಾರ "ಕೆಎಸ್ಸಾರ್ಟಿಸಿ ನರ್ಮ್ ಬಸ್ಸುಗಳನ್ನು ಹಾಕಿತ್ತು. ಅದರ ವಿರುದ್ಧ ಖಾಸಗಿ ಬಸ್ ಮಾಲಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಇಲ್ಲಿ ಬೇಸರದ ಸಂಗತಿಯೇನೆಂದರೆ "ಕೆಎಸ್ಸಾರ್ಟಿಸಿ ನರ್ಮ್ ಬಸ್ ಸಂಚರಿಸುತ್ತಿದ್ದ ಅಮ್ಮೆಂಬಳ ಎಂಬ ಹಳ್ಳಿಗೆ ಖಾಸಗಿ ಬಸ್ಸುಗಳು ಹೋಗುತ್ತಿರಲಿಲ್ಲ. ಜನರು ಖಾಸಗಿ ಬಸ್ ಹಿಡಿಯಬೇಕಾದರೆ ಎರಡರಿಂದ ಮೂರು ಕಿಲೋ ಮೀಟರ್ ನಡೆಯಬೇಕಿತ್ತು. ಅಲ್ಲಿ ಸರಕಾರಿ ಬಸ್ಸು ಪ್ರಾರಂಭವಾದ್ದರಿಂದ ಜನರಿಗೆ ತುಂಬಾ ಅನುಕೂಲವಾಗಿತ್ತು. ಹೀಗಿರುವಾಗ ಜನರಿಗೆ ಅನುಕೂಲವಾಗುವ ಯೋಜನೆ ಪ್ರಾರಂಭಿಸಲು ಸರಕಾರ ಖಾಸಗಿ ಬಸ್ ಮಾಲಕರ ಅನುಮತಿ ಪಡೆಯಬೇಕೇ?
ಒಟ್ಟಿನಲ್ಲಿ ನನ್ನ ಬೇಡಿಕೆಯೇನೆಂದರೆ ಸರಕಾರ ಯಾವ ಕಾರಣಕ್ಕೂ ಖಾಸಗಿ ಬಸ್ ಲಾಬಿಗಳಿಗೆ ಮಣಿಯಬಾರದು ಮತ್ತು ಸರ್ಕಾರದ ಸಂಬಳ ತಿಂದು ಖಾಸಗಿ ಲಾಬಿಗಳಿಗೆ ನಿಯ್ಯತ್ತು ತೋರುವ ಸಿಬ್ಬಂದಿ ಮೇಲೆ ನಿಗಾ ವಹಿಸಬೇಕು.