ರಸ್ತೆ ಕಾಮಗಾರಿ ಆರಂಭಿಸಿ
ಮಾನ್ಯರೇ,
ಗಜೇಂದ್ರಗಡ ಗದಗ ರೋಡಿನ ಟಿ.ಟಿ.ಡಿ. ಕಲ್ಯಾಣ ಮಂಟಪದಿಂದ ಭೂಮರೆಡ್ಡಿ ಎಂಬವರ ಹೊಲದವರೆಗೆ ರಸ್ತೆ ಕಾಮಗಾರಿ ಟೆಂಡರ್ ಆಗಿದೆ. ಈ ಕಾಮಗಾರಿಯ ಮೊತ್ತ ಎಷ್ಟು? ಗುತ್ತಿಗೆದಾರರು ಯಾರು? ಯಾವ ಯೋಜನೆಯದ್ದು? ಇವೆಲ್ಲದರ ಮಾಹಿತಿ ಯಾರಿಗೂ ಗೊತ್ತಿಲ್ಲ. ಇದರ ನಾಮಫಲಕ ಇಲ್ಲದೆ, ಇದು ಎಷ್ಟು ದಿನಗಳೊಳಗಾಗಿ ಮುಗಿಯ ಬೇಕಾದ ಕಾಮಗಾರಿ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಈ ರಸ್ತೆ ಕಾಮಗಾರಿ ಕೆಲಸ ಪ್ರಾರಂಭಿಸಬೇಕೆಂದು ಇರುವ ರಸ್ತೆಯನ್ನು ಆಗೆದಿದ್ದಾರೆ. ಆದರೆ ಅಗೆದು ಒಂದು ತಿಂಗಳಾದರೂ ಇನ್ನೂ ಈ ರಸ್ತೆ ಕಾಮಗಾರಿ ಆರಂಭವಾಗುವ ಲಕ್ಷಣ ಕಾಣುತ್ತಿಲ್ಲ. ದಿನನಿತ್ಯ ಬೇರೆಬೇರೆ ಕಾರಣಗಳಿಗಾಗಿ ಸಂಚರಿಸಬೇಕಾದವರು ಈ ಅಗೆದ ರಸ್ತೆಯ ಧೂಳು ತಿನ್ನುತ್ತಲೇ ಇರಬೇಕಾಗಿದೆ. ಹಾಗಾಗಿ ಈ ಧೂಳು ಸೇವನೆಯಿಂದ ಹಲವರು ಆರೋಗ್ಯ ಕೆಡಿಸಿಕೊಳ್ಳಬೇಕಾಗಿದೆ. ಇಂತಹ ಬೇಜವಾಬ್ದಾರಿಗೆ ಕಾಮಗಾರಿ ಗುತ್ತಿಗೆ ಪಡೆದವರು ಮತ್ತು ಸಂಬಂಧಿತ ಇಲಾಖೆಯ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಇನ್ನಾದರೂ ಜವಾಬ್ದಾರಿ ಅರಿತು ಸಂಬಂಧಿಸಿದವರು ಕ್ರಮ ಕೈಗೊಂಡಾರೇ?.
ಮಲ್ಲೇಶ್ ಜಂತ್ಲಿ,
ಗಜೇಂದ್ರಗಡ, ಗದಗ