ಬೇರೆ ರಾಜ್ಯಗಳಲ್ಲೂ ಕಠಿಣ ಕ್ರಮವಿರಲಿ
ಮಾನ್ಯರೇ,
ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಅತೀ ಹೆಚ್ಚಿನ ಕ್ರಮಗಳನ್ನು ಕೈಗೊಂಡು, ಚುನಾವಣೆ ನಿಷ್ಪಕ್ಷಪಾತವಾಗಿ, ನಿರ್ಭೀತವಾಗಿ ನಡೆಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದು ಶ್ಲಾಘನೀಯ. ನೀತಿ ಸಂಹಿತೆಯ ಹೆಸರಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಪ್ರಚಾರ, ಖರ್ಚುವೆಚ್ಚದ ವಿಚಾರದಲ್ಲಿಯೂ ನಿಗಾ ವಹಿಸಿರುವುದು ಸರಿಯಾದ ಕ್ರಮ. ಇಂತಹದ್ದೇ ರೀತಿಯಲ್ಲಿ, ಚುನಾವಣಾ ಆಯೋಗ ಮುಂದಿನ ಕೆಲವೇ ತಿಂಗಳಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶದ ವಿಧಾನ ಸಭಾ ಚುನಾವಣೆಗಳಲ್ಲೂ ಅನುಸರಿಸಲಿ.
ಚುನಾವಣಾ ಆಯೋಗ ಕೇಂದ್ರ ಸರಕಾರದ ಕೈಗೊಂಬೆಯಾಗದೆ, ಯಾವುದೇ ಪಕ್ಷಪಾತ ನಡೆಸದೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೂ ಕಟ್ಟುನಿಟ್ಟಾದ ರೀತಿಯಲ್ಲಿ ಚುನಾವಣೆ ನಡೆಸಿದರೆ, ಆಯೋಗದ ಗೌರವ ಹೆಚ್ಚುತ್ತದೆ. ಕೇವಲ ವಿರೋಧ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಾತ್ರ ಚುನಾವಣಾ ಆಯೋಗ ಕ್ರಿಯಾಶೀಲವಾಗಿದ್ದು, ಬೇರೆ ರಾಜ್ಯಗಳ ನೀತಿ ಸಂಹಿತೆ ವಿಚಾರದಲ್ಲಿ ಮೃದು ಧೋರಣೆ ಅನುಸರಿಸಿದರೆ, ಆಯೋಗದ ನಿಲುವಿನ ಬಗ್ಗೆ ಸಂಶಯ ಬರುತ್ತದೆ. ಹೀಗಾಗದಂತೆ ಚುನಾವಣಾ ಆಯೋಗ ಎಚ್ಚರಿಕೆ ವಹಿಸಲಿ.