ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಇನ್ನೊಂದು ಸೋಲಿಗೆ ತಯಾರಿ ನಡೆಸುತ್ತಿದೆಯೇ ಜಿಲ್ಲಾ ಕಾಂಗ್ರೆಸ್?
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಹರಿವಾಣದಲ್ಲಿಟ್ಟು ಬಿಜೆಪಿಗೆ ಕೊಟ್ಟಿರುವ ಕಾಂಗ್ರೆಸ್ ಪಕ್ಷದ ಕರಾವಳಿ ಮುಖಂಡರು 2019ರಲ್ಲಿ ಮತ್ತೆ ಸ್ಪರ್ಧೆಯ ಪ್ರಹಸನ ಮಾಡಿ ಬಿಜೆಪಿಯನ್ನು ಗೆಲ್ಲಿಸಲು ತುದಿಗಾಲಲ್ಲಿ ನಿಂತಿರುವಂತೆ ಕಂಡು ಬರುತ್ತಿದೆ. ತಮ್ಮ ಮುಖಂಡರ ಕಿವಿ ಹಿಂಡುವಲ್ಲಿ ಪಕ್ಷದ ಕಾರ್ಯಕರ್ತರು ತಡ ಮಾಡಿದರೆ ಈ ಬಾರಿ ನಿಷ್ಪ್ರಯೋಜಕ ನಳಿನ್ ಕಳೆದ ಬಾರಿಗಿಂತ ಹೆಚ್ಚಿನ ಅಂತರದಿಂದ ಗೆದ್ದು ದಿಲ್ಲಿ ಸೇರುವುದು ಖಚಿತ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಳೆದ ಸತತ ಏಳು ಚುನಾವಣೆಗಳಲ್ಲಿ ಸೋತಿದೆ. ಇದರಲ್ಲಿ ಆರು ಬಾರಿ ಜನಾರ್ದನ ಪೂಜಾರಿ ಮತ್ತು ಒಮ್ಮೆ ವೀರಪ್ಪ ಮೊಯ್ಲಿ ಸ್ಪರ್ಧಿಸಿ ಸೋಲುಂಡಿದ್ದಾರೆ. ಈ ಏಳರಲ್ಲಿ ಬಿಜೆಪಿಯಿಂದ ನಾಲ್ಕು ಬಾರಿ ಧನಂಜಯ ಕುಮಾರ್, ಒಮ್ಮೆ ಸದಾನಂದ ಗೌಡ ಮತ್ತು ಎರಡು ಬಾರಿ ನಳಿನ್ ಕುಮಾರ್ ಕಟೀಲ್ ಗೆದ್ದು ಬಂದಿದ್ದಾರೆ.
ಈಗ ಹೆಚ್ಚು ಇತಿಹಾಸ ಕೆದಕದೆ ಕೇವಲ ಕಳೆದೆರಡು ಲೋಕಸಭಾ ಚುನಾವಣೆಗಳನ್ನು ಮಾತ್ರ ಸ್ವಲ್ಪ ನೋಡೋಣ. 2009ರಲ್ಲಿ ಬಿಜೆಪಿ ನಳಿನ್ ರ ಹೆಸರು ಘೋಷಿಸಿದಾಗ ಸ್ವತಃ ಬಿಜೆಪಿಯ ಸ್ಥಳೀಯ ನಾಯಕರೇ ಅಚ್ಚರಿಗೊಂಡಿದ್ದರು. ಒಮ್ಮೆಯೂ ಯಾವುದೇ ಚುನಾವಣೆಗೆ ಸ್ಪರ್ಧಿಸದ, ಸಂಸತ್ತಿಗೆ ಹೋಗುವ ವರ್ಚಸ್ಸು ಇಲ್ಲದ, ಯಾವುದೇ ಆಡಳಿತಾತ್ಮಕ ಅನುಭವವೂ ಇಲ್ಲದ , ಕೇವಲ ಪ್ರಚೋದನಕಾರಿ ಭಾಷಣಗಳಿಂದ ಮಾತ್ರ ಗುರುತಿಸಲ್ಪಟ್ಟಿದ್ದ ನಳಿನ್ ಇದ್ದಕ್ಕಿದ್ದಂತೆ ಲೋಕಸಭಾ ಅಭ್ಯರ್ಥಿಯಾಗಿಬಿಟ್ಟರು. ಸಾಮಾನ್ಯ ಶರ್ಟು, ಪ್ಯಾಂಟು ಹಾಕಿ ಕಾರ್ಯಕರ್ತರ ಜೊತೆಗಿದ್ದ ನಳಿನ್ ಗರಿಗರಿ ಖಾದಿ ಜುಬ್ಬಾ ತೊಟ್ಟು ಚುನಾವಣಾ ಅಖಾಡ ಪ್ರವೇಶಿಸಿದರು.
ಹೇಗೂ ಪಕ್ಷ ಅಭ್ಯರ್ಥಿ ಘೋಷಿಸಿದೆ, ಇನ್ನು ಗೆಲ್ಲಿಸುವುದು ನಮ್ಮ ಜವಾಬ್ದಾರಿ ಎಂದು ಜಿಲ್ಲೆಯ ಬಿಜೆಪಿಗರು ಮೈಕೊಡವಿಕೊಂಡು ಎದ್ದು ನಿಂತರು. ಅದೇ ಹೊತ್ತಿಗೆ ಇನ್ನೊಂದೆಡೆ ನಳಿನ್ ಹೆಸರು ಕೇಳಿದ್ದೇ ಕಾಂಗ್ರೆಸಿಗರೆಲ್ಲ ಮೈಮರೆತು ಬಿಟ್ಟರು. ಪೂಜಾರಿಯವರೇನೋ ಭಾರೀ ಉತ್ಸಾಹದಿಂದ ಯುವಕರನ್ನೂ ನಾಚಿಸುವಂತೆ ಜಿಲ್ಲೆಯಾದ್ಯಂತ ಓಡಾಡಿದರು. ಈ ಬಾರಿ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಹೇಳುತ್ತಾ ಜನರನ್ನು ಸೆಳೆಯಲು ಪ್ರಯತ್ನಿಸಿದರು. ಆದರೆ ಕಾಂಗ್ರೆಸ್ ಮುಖಂಡರು ಮಾತ್ರ ಚುನಾವಣೆಯನ್ನು ಎದುರಿಸುವ ರಣತಂತ್ರ ಹೆಣೆಯುವುದನ್ನು ಬಿಟ್ಟು ಪೂಜಾರಿಯ ಹಿಂದೆ ಮುಂದೆ ಠಳಾಯಿಸಿ ಸಮಯ ಕಳೆದರು.
ಅಭ್ಯರ್ಥಿ ಯಾರು ಎಂಬುದು ಮುಖ್ಯವಲ್ಲ, ಪಕ್ಷ, ಸಂಘಟನೆ ಮತ್ತು ಕಾರ್ಯಕರ್ತರೇ ಮುಖ್ಯ ಎಂದು ಬಿಜೆಪಿ ಸಮರೋಪಾದಿಯಲ್ಲಿ ಕೆಲಸ ಮಾಡಿತು. ಎಲ್ಲರೂ ಒಳಗೊಳಗೇ "ಈ ಸರ್ತಿ ಬಿಜೆಪಿಗ್ ಬಂಗ.. " ಎಂದು ಹೇಳುತ್ತಿದ್ದರೆ ಬಿಜೆಪಿ ಮಾತ್ರ ತಾನು ಎಷ್ಟು ಮತಗಳ ಅಂತರದಿಂದ ಗೆಲ್ಲಬೇಕು ಎಂದು ಕರಾರುವಕ್ಕಾಗಿ ಲೆಕ್ಕ ಹಾಕಿ ಅದಕ್ಕೆ ಬೇಕಾದ ತಯಾರಿಯನ್ನು ತಳಮಟ್ಟದಿಂದ ಸದ್ದಿಲ್ಲದೆ ಮಾಡುತ್ತಾ ಹೋಯಿತು. ಮಂಗಳೂರು ನಗರದಿಂದ ಹಿಡಿದು ಸುಳ್ಯದ ಕೊನೆಯ ಗ್ರಾಮದವರೆಗಿನ ತನ್ನ ಪ್ರತಿಯೊಬ್ಬ ಕಾರ್ಯಕರ್ತನನ್ನು ಕೆಲಸಕ್ಕೆ ಹಚ್ಚಿತು. ಇಡೀ ಬಿಜೆಪಿ ಮತ್ತು ಸಂಘಪರಿವಾರ ಒಂದು ಬಲಿಷ್ಠ ಟೀಮ್ ಆಗಿ ಕಾರ್ಯಾಚರಣೆ ನಡೆಸಿದವು. ದಾರಿಯಲ್ಲಿ ಸಿಕ್ಕ ಪೂಜಾರಿಯ ಕಾಲಿಗೆ ಬಿದ್ದರು ನಳಿನ್. ಪೂಜಾರಿ ಅವರ ಬೆನ್ನು ತಟ್ಟಿದರು. ಅಲ್ಲಿಗೆ ನಳಿನ್ ಸೋಲೊಪ್ಪಿಕೊಂಡೇ ಬಿಟ್ಟರು ಎಂದು ಮಂಗಳೂರಿನ ಹೊಟೇಲುಗಳಲ್ಲಿ ಊಟ ಮಾಡಿ ಹಲ್ಲಿಗೆ ಕೋಲು ಹಾಕಿ ಕಾಂಗ್ರೆಸ್ ನಾಯಕರು ಸ್ಟೇಟ್ ಮೆಂಟ್ ಕೊಟ್ಟರು. ಆದರೆ ಸಂಘಪರಿವಾರ ಮಾತ್ರ ಚುನಾವಣೆ ಮುಗಿದ ಸಂಜೆಯೇ ಲೆಕ್ಕ ಹಾಕಿ ನಾವು ನಲ್ವತ್ತು ಸಾವಿರ ಮತಗಳಿಂದ ಗೆಲ್ಲುತ್ತೇವೆ ಎಂದಿತು. ಎಲ್ಲರೂ ನಗಾಡಿದರು. ಕೊನೆಗೆ ಫಲಿತಾಂಶ ಬಂದಾಗ ಸಾಮಾನ್ಯ ಕಾರ್ಯಕರ್ತ ನಳಿನ್ ಲೋಕಸಭಾ ಸದಸ್ಯರಾದರು. ಪೂಜಾರಿ ಐದನೇ ಬಾರಿ ಸೋತು ಮನೆ ಸೇರಿದರು.
2014ರಲ್ಲಿ ಜಿಲ್ಲೆಯಲ್ಲಿ ಬೇರೆಯದೇ ವಾತಾವರಣವಿತ್ತು. ದೇಶಾದ್ಯಂತ ಮೋದಿ ಹವಾ ಇದ್ದರೂ ಜಿಲ್ಲೆಯಲ್ಲಿ ಸಂಸದ ನಳಿನ್ ಕುರಿತು ಪಕ್ಷದೊಳಗೇ ತೀವ್ರ ಅಸಮಾಧಾನವಿತ್ತು. ಕ್ಷೇತ್ರದ ಜನರಿಗಂತೂ ಅವರ ಮೇಲೆ ಯಾವ ಒಲವೂ ಇರಲಿಲ್ಲ. ಅವರಿಗೆ ಟಿಕೆಟ್ ಸಿಗುವುದೇ ಸಂಶಯ ಎಂಬಲ್ಲಿಯವರೆಗೆ ಪರಿಸ್ಥಿತಿ ಸೃಷ್ಟಿಯಾಯಿತು. ಕೊನೆಗೂ ಅದೇಗೋ ನಳಿನ್ ಕಸರತ್ತು ಮಾಡಿ ಟಿಕೆಟ್ ಪಡೆದುಬಿಟ್ಟರು. ಆದರೆ ಒಟ್ಟಾರೆ ಪರಿಸ್ಥಿತಿ ಜಿಲ್ಲೆಯಲ್ಲಿ ಅವರಿಗೆ ಪೂರಕವಾಗಿರಲಿಲ್ಲ. ಅದ್ಯಾವುದೋ ಸಮೀಕ್ಷೆಯೊಂದು ಅವರಿಗೆ ರಾಜ್ಯದಲ್ಲಿ 'ನಂಬರ್ ಒನ್ ಸಂಸದ' ಎಂದು ಬಿರುದು ಕೊಟ್ಟರೂ ಅದು ಜನರ ಮನಸ್ಸಿಗೆ ಇಳಿಯಲೇ ಇಲ್ಲ. ಇತ್ತ ಕಾಂಗ್ರೇಸಿನಿಂದ ಮತ್ತೆ ಎಲ್ಲ ಆಕಾಂಕ್ಷಿಗಳನ್ನು ಹೇಗೋ ನಿಭಾಯಿಸಿ ಪೂಜಾರಿ ಟಿಕೆಟ್ ತೆಗೆದುಕೊಂಡು ಬಂದರು. ಪಕ್ಷದೊಳಗೂ, ಹೊರಗೂ ಈ ಬಾರಿ ಅವರನ್ನೊಮ್ಮೆ ಗೆಲ್ಲಿಸಬೇಕು ಎಂಬ ಅನುಕಂಪ ಕಂಡುಬಂದಿತ್ತು. ಆದರೆ ಮೋದಿ ಮೇನಿಯಾ ಹರಡುತ್ತಿರುವ ಸಿಗ್ನಲ್ ಗುರುತಿಸಿದ ಪೂಜಾರಿ 'ನನ್ನ ಸ್ಪರ್ಧೆ ಮೋದಿ ವಿರುದ್ಧ' ಎಂದು ಘೋಷಿಸಿ ತೊಡೆ ತಟ್ಟಿ ಕಣಕ್ಕಿಳಿದರು.
ಆದರೆ ಪೂಜಾರಿ ಅರ್ಥಮಾಡಿಕೊಂಡ ಮೋದಿ ಅಲೆಯ ತೀವ್ರತೆಯನ್ನು ಜಿಲ್ಲೆಯ ಇತರ ಕಾಂಗ್ರೆಸ್ ಮುಖಂಡರು ಅರಿಯಲಿಲ್ಲ. ಮತ್ತೆ ಅದೇ ಪ್ರೆಸ್ ಮೀಟ್ , ವುಡ್ ಲ್ಯಾಂಡ್ಸ್ ಊಟ ಇತ್ಯಾದಿಗಳಲ್ಲೇ ಕಾಲ ಕಳೆದರು. ಪೂಜಾರಿ ಬರುವಾಗ ಹೋಗುವಾಗ ಅವರ ಹಿಂದೆ ನಿಂತು ಫೋಟೋಗೆ ಪೋಸ್ ಕೊಟ್ಟರು. ಇದೇ ನನಗೆ ಕೊನೆಯ ಅವಕಾಶ ಎಂದು ಅರಿತುಕೊಂಡ ನಳಿನ್ ಮತ್ತು ಹೇಗಾದರೂ ಮೋದಿಯನ್ನು ಪ್ರಧಾನಿ ಮಾಡಲೇಬೇಕು ಎಂದು ಪಣತೊಟ್ಟ ಬಿಜೆಪಿಯ ಕಾರ್ಯಕರ್ತರ ಪಡೆ ಯುದ್ಧಕ್ಕೆ ಇಳಿದವರಂತೆ ಕೆಲಸ ಮಾಡಿದರು. ಒಂದೊಂದು ಮತವನ್ನೂ ಸೆಳೆದರು. ಒಂದೂವರೆ ಲಕ್ಷ ಮತಗಳಿಂದ ಗೆದ್ದರು!. ಆ ಚುನಾವಣೆಯಲ್ಲಿ ದೇಶದಲ್ಲೇ ಮೊದಲ ಫಲಿತಾಂಶ, ಬಿಜೆಪಿಯಿಂದ ಮೊದಲ ಸಂಸದನ ಆಯ್ಕೆಯ ಘೋಷಣೆ ಮಂಗಳೂರಿನಲ್ಲಾಯಿತು. ಪೂಜಾರಿ ಆರನೇ ಬಾರಿ ಹೀನಾಯ ಸೋಲುಂಡು ಕಂಗೆಟ್ಟರು.
ಈಗ 2019ರಲ್ಲಿ ಮತ್ತೆ ಜಿಲ್ಲೆಯಲ್ಲಿ ಪರಿಸ್ಥಿತಿ ಬಿಜೆಪಿಗೆ ಪೂರಕವೇನೂ ಇಲ್ಲ. ಜಿಲ್ಲೆಯಲ್ಲಿ ಎಂಟರಲ್ಲಿ ಏಳು ಎಮ್ಮೆಲ್ಲೆಗಳು ಬಿಜೆಪಿಯವರು. ಆದರೆ ಅದು ಲೋಕಸಭಾ ಚುನಾವಣೆಗೆ ಹಾಗೇ ಓಟು ತಂದುಕೊಡುತ್ತದೆ ಎಂದು ಹೇಳುವ ಹಾಗಿಲ್ಲ. ನಳಿನ್ ಕುರಿತೂ ಸಾಕಷ್ಟು ದೂರುಗಳಿವೆ. ಇನ್ನು ಒಟ್ಟಾರೆ ಮೋದಿ ಆಡಳಿತದ ಬಗ್ಗೆ ಜನರಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ. ಆರ್ಥಿಕತೆಯ ಹಳಿತಪ್ಪಿಸಿದರು ಎಂದು ಅಲ್ಲಲ್ಲಿ ಜನರು ಮೋದಿಯನ್ನು ದೂರುತ್ತಿದ್ದಾರೆ. ಆದರೆ ಇದರರ್ಥ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಗೆ ಅನುಕೂಲಕರ ಪರಿಸ್ಥಿತಿ ಇದೆ ಎಂದೇ ?, ಹೌದು ಇದೆ ಎಂದು ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭ್ರಮೆಯಲ್ಲಿದ್ದರೆ ಕಳೆದೆರಡು ಬಾರಿಗಿಂತ ಹೆಚ್ಚು ಮತಗಳ ಅಂತರದಿಂದ ಅವರೇ ಈ ಬಾರಿ ಬಿಜೆಪಿಯನ್ನು ಗೆಲ್ಲಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರು ತಿಳಿದುಕೊಳ್ಳಲೇ ಬೇಕಾದ ಆದರೆ ಅವರು ತಿಳಿದುಕೊಳ್ಳಲು ಸಿದ್ಧವೇ ಇಲ್ಲದ ಸತ್ಯವೊಂದಿದೆ. ಈಗಲೂ ಅವರು ಆ ಸತ್ಯವನ್ನು ತಿಳಿದು ಒಪ್ಪಿಕೊಂಡರೆ ಮಾತ್ರ ಅವರಿಗಿಲ್ಲಿ ಉಳಿಗಾಲ. ಅದೇನೆಂದರೆ ಇಲ್ಲಿ ನಳಿನ್, ಮೋದಿ ಇವರೆಲ್ಲ ಮುಖ್ಯ ಅಲ್ಲ. ಇಲ್ಲಿ ನಡೆಯುವುದು ಬಿಜೆಪಿ ತಳಮಟ್ಟದಲ್ಲಿ ಕಟ್ಟಿರುವ ಕಾರ್ಯಕರ್ತರ ಪಡೆಯ ಆಟ. ಪ್ರತಿ ಗಲ್ಲಿಗೆ, ಪ್ರತಿ ಮನೆಗೆ, ಪ್ರತಿ ಮತದಾರನಿಗೆ ತಲುಪುವ ಅವರ ಕಾರ್ಯವೈಖರಿ ಇಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತಾ ಬಂದಿದೆ. ಹಾಗಾಗಿ ಇಲ್ಲಿ ಅವರಿಗೆ ಅಭ್ಯರ್ಥಿ ಮುಖ್ಯ ಅಲ್ಲ, ಪಕ್ಷ ಮತ್ತು ಅದರ ಸಿದ್ಧಾಂತದ ಗೆಲುವಿಗಾಗಿ ಅವರು ಎಲ್ಲವನ್ನೂ ಪಣಕ್ಕಿಟ್ಟು ದುಡಿಯುತ್ತಾರೆ. ಸ್ಥಳೀಯ ನಾಯಕರೂ ಅಷ್ಟೇ. ಅವರು ಅವರಿಗೆ ಕೊಟ್ಟ ಜವಾಬ್ದಾರಿಯನ್ನು ಬಿಟ್ಟು ಫೋಟೋಗೆ ಪೋಸ್ ಕೊಡಲು ನಿಲ್ಲುವುದಿಲ್ಲ. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಪಕ್ಷ ಗೆಲ್ಲುವುದನ್ನು ನೋಡಲು ಕಾದು ಕುಳಿತುಕೊಳ್ಳುವ ಜಾಯಮಾನ ಅವರದ್ದು.
ಕಾಂಗ್ರೆಸ್ ಈಗ ಸೋಲಿಸಬೇಕಿರುವುದು ನಳಿನ್ ರನ್ನು ಅಲ್ಲ. ಬಿಜೆಪಿಯ ಸಂಘಟನಾ ಶಕ್ತಿಯನ್ನು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಎಲ್ಲಿದೆ?, ರಮಾನಾಥ ರೈ ಮತ್ತು ಅವರ ಬೆಂಬಲಿಗರದ್ದೊಂದು ಸಂಘಟನೆ, ಯು.ಟಿ. ಖಾದರ್ ಮತ್ತು ಅವರ ಹಿಂಬಾಲಕರದ್ದೊಂದು ಸಂಘಟನೆ, ಜೆ. ಆರ್. ಲೋಬೊ ಮತ್ತು ಅವರ ಜೊತೆಗಿರುವವರ ಸಂಘಟನೆ, ಶಕುಂತಲಾ ಶೆಟ್ಟಿಯವರದ್ದೊಂದು ಸಂಘಟನೆ... ಹೀಗೆ ಒಂದೊಂದು ನಾಯಕರದ್ದು ಒಂದೊಂದು ಕಾಂಗ್ರೆಸ್. ತಮ್ಮ ನಾಯಕ ಗೆಲ್ಲಬೇಕೆಂದು ಶ್ರಮಿಸುವ (ಅದರಲ್ಲೂ ದುಡ್ಡು ತೆಗೆದುಕೊಂಡು ಕೈಕೊಡುವ ಹಿಂಬಾಲಕರಿದ್ದಾರೆ), ತಮ್ಮದೇ ಪಕ್ಷದ ಇನ್ನೊಬ್ಬ ನಾಯಕನನ್ನು ಸೋಲಿಸಲು ಹೆಣಗಾಡುವ, ಹೇಗಾದರೂ ಹಿರಿಯ ನಾಯಕರ ಕೃಪಾಕಟಾಕ್ಷಕ್ಕೆ ಪಾತ್ರವಾಗಲು ಪರದಾಡುವ, ತನ್ನದೇ ಪಕ್ಷದ ಇನ್ನೊಬ್ಬ ಹಿರಿಯರ ಪ್ರಶಂಸೆ ಪಡೆದರೆ ಆತನ ಕಾಲೆಳೆಯುವ ಹಿಂಬಾಲಕರ ಪಡೆ ಮಾತ್ರ ಇಲ್ಲಿ ಕಾಂಗ್ರೆಸ್ ಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯ ಎಷ್ಟು ಮತದಾರರನ್ನು ತಲುಪಿದ್ದಾರೆ ?, ಎಷ್ಟು ಮನೆಗಳಿಗೆ ಹೋಗಿದ್ದಾರೆ ?, ಎಷ್ಟು ಮತದಾರರಿಗೆ ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ವಿವರಿಸಿದ್ದಾರೆ ?, ಎಷ್ಟು ಜನರಿಗೆ ಬಿಜೆಪಿಯ ವೈಫಲ್ಯಗಳನ್ನು ಹೇಳಿ ಕೊಟ್ಟಿದ್ದಾರೆ ?, ಸಂಘಪರಿವಾರದ ಜಾತಿ ರಾಜಕೀಯದ ಬಗ್ಗೆ ಎಷ್ಟು ಮತದಾರರಿಗೆ ತಿಳಿ ಹೇಳಿದ್ದಾರೆ ? ಕಾಂಗ್ರೆಸ್ ನಿಂದ ಪಡೆದ ಲಾಭಗಳನ್ನು ಎಷ್ಟು ಮತದಾರರಿಗೆ ನೆನಪಿಸಿದ್ದಾರೆ ? ಮತದಾನದ ದಿನ ಬೂತ್ ಮಟ್ಟದಲ್ಲಿ ಎಷ್ಟು ಕಾರ್ಯಕರ್ತರು ಕೆಲಸ ಮಾಡಿದ್ದಾರೆ?, ಬಿಲ್ಲವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಬಂಟರಿಗೆ ಒಂದೇ ಜಿಲ್ಲೆಯಲ್ಲಿ ನಾಲ್ಕು ಟಿಕೆಟ್ ಕೊಟ್ಟರೂ ಹೇಗೆ ಬಿಜೆಪಿ ಎಂಟರಲ್ಲಿ ಏಳು ಸ್ಥಾನಗಳಲ್ಲಿ ಭರ್ಜರಿ ಬಹುಮತದೊಂದಿಗೆ ಗೆದ್ದಿತು?, ಬಿಜೆಪಿಯವರು ಅಪಪ್ರಚಾರ ಮಾಡಿ ಗೆಲ್ಲುತ್ತಾರಾದರೆ ಕಾಂಗ್ರೆಸ್ ಗೆ ಪರಿಣಾಮಕಾರಿಯಾಗಿ ಪ್ರಚಾರ ಮಾಡಿ ಗೆಲ್ಲಲು ಯಾಕೆ ಸಾಧ್ಯವಿಲ್ಲ?, ಅವರು ಸುಳ್ಳು ಹರಡಿ ಸೋಲಿಸಿದರು ಎನ್ನುವ ಕಾಂಗ್ರೆಸಿಗರಿಗೆ ಸತ್ಯ ಹರಡಿ ಓಟು ಪಡೆಯಲು ಯಾಕೆ ಸಾಧ್ಯವಿಲ್ಲ?...
ಈ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸದೆ ಲೋಕಸಭಾ ಅಭ್ಯರ್ಥಿಯಾಗಲು ಹೊರಟರೆ ರಮಾನಾಥ ರೈ ಮತ್ತು ವಿನಯ್ ಕುಮಾರ್ ಸೊರಕೆ ಮತ್ತಿತರರು ವಿಧಾನಸಭಾ ಸೋಲಿನ ಕಹಿ ಮರೆಯುವ ಮುನ್ನವೇ ಇನ್ನೊಂದು ಭಾರೀ ಸೋಲನ್ನು ಅಪ್ಪಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ.
ದಕ್ಷಿಣ ಕನ್ನಡಕ್ಕೆ ( ಉಡುಪಿಗೂ ) ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದು ಅಲ್ಲ ಈಗಿರುವ ಪ್ರಮುಖ ಪ್ರಶ್ನೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯನ್ನು ಹೇಗೆ ಪ್ರಾರಂಭಿಸಬೇಕು ಮತ್ತು ಹೇಗೆ ಜಿಲ್ಲೆಯಾದ್ಯಂತ ಅದನ್ನು ಬೆಳೆಸಬೇಕು ಎಂಬುದು ಈಗ ಕಾಂಗ್ರೆಸಿಗರು ಉತ್ತರಿಸಬೇಕಾದ ಪ್ರಶ್ನೆ. ಅದನ್ನು ಬಿಟ್ಟು ನಳಿನ್ ರನ್ನು ಟೀಕಿಸಿ ಪ್ರೆಸ್ ಮೀಟ್ ಮಾಡಿ ಚುನಾವಣೆ ಗೆಲ್ಲುತ್ತೇನೆಂದು ಹೊರಟರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ನಳಿನ್ ಏನು ಕಡಿದು ಕಟ್ಟೆ ಹಾಕಿದ್ದಾರೆ ಎಂಬುದನ್ನು ಮಾತ್ರ ನೋಡಿ ಜನರು ಓಟ್ ಹಾಕುವುದಿಲ್ಲ. ಚುನಾವಣೆಯ ಕಾವೇರುವಾಗ ಯಾರು ನಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ ?, ಯಾರು ಅಂಗಡಿ ಕಟ್ಟೆಯಲ್ಲಿ ನಮ್ಮ ಜೊತೆ ನಿಂತು ತಮ್ಮ ಪಕ್ಷದ ಪರ ಮಾತಾಡಿದ್ದಾರೆ ?, ನಾವು ಅವರಿಗೆ ಮತ ಹಾಕುವುದಿಲ್ಲ ಎಂದು ಗೊತ್ತಿದ್ದರೂ ಓಟ್ ಕೊಡುವಂತೆ ಮತ್ತೆ ಮತ್ತೆ ಯಾರು ಬೆನ್ನು ಬಿದ್ದಿದ್ದಾರೆ ?... ಇವೆಲ್ಲವನ್ನೂ ನೋಡಿ ಜನ ಮತ ಹಾಕುತ್ತಾರೆ. ಅದನ್ನು ಕಾಂಗ್ರೆಸ್ ಮುಖಂಡರು ಮೊದಲು ತಿಳಿದುಕೊಳ್ಳಲಿ.
ಗೆದ್ದು ಅಧಿಕಾರದಲ್ಲಿರುವಾಗ ಕೇವಲ ಹಿಂಬಾಲಕರನ್ನು ಉದ್ಧಾರ ಮಾಡುವಲ್ಲೇ ಸಮಯ ಕಳೆದ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಈಗಲಾದರೂ ಪಕ್ಷ ಸಂಘಟಿಸುವಲ್ಲಿ ಮುತುವರ್ಜಿ ವಹಿಸಬೇಕಿತ್ತು. ಅದನ್ನು ಬಿಟ್ಟು ಮತ್ತೊಂದು ಸೋಲಿಗಾಗಿ ಟಿಕೆಟ್ ಹಿಂದೆ ಬಿದ್ದಿದ್ದಾರೆ ಈ ನಾಯಕಮಣಿಗಳು. ಹತ್ತು ಹಲವು ಜನಪರ ಯೋಜನೆಗಳನ್ನು ಕೊಟ್ಟ ಸಿದ್ದರಾಮಯ್ಯ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯೇ ಇರಲಿಲ್ಲ. ಬಿಜೆಪಿ ಬಗ್ಗೆ ವ್ಯಾಪಕ ಒಲವೂ ಇರಲಿಲ್ಲ. ಆದರೂ ಜಿಲ್ಲೆಯಲ್ಲಿ ಕಾಂಗ್ರೆಸ್ ಕೈಯಲ್ಲಿದ್ದ ಏಳು ಸ್ಥಾನಗಳನ್ನು ಹೀನಾಯವಾಗಿ ಸೋತಿದ್ದೇಕೆ?, ಕೇವಲ ಇವಿಎಂ ಅನ್ನು ದೂರಿ ತಮ್ಮ ಬಟ್ಟಲಲ್ಲಿ ಬಿದ್ದಿರುವ ಹೆಗ್ಗಣವನ್ನು ನೋಡದಿದ್ದರೆ ಇನ್ನೊಂದು ಚುನಾವಣೆಯಲ್ಲೂ ತಿರಸ್ಕೃತರಾಗುವ ಸಾಧ್ಯತೆಯೇ ಹೆಚ್ಚು.
ಒಂದಲ್ಲೊಂದು ಸ್ಥಾನದಲ್ಲಿದ್ದರೆ ಮಾತ್ರ ಉಸಿರಾಡಲು ಸಾಧ್ಯ ಎಂಬ ಮನಸ್ಥಿತಿಯ ಈ ನಾಯಕರು ಸ್ವತಃ ಉದ್ಧಾರವಾಗೋದಿಲ್ಲ, ಪಕ್ಷವನ್ನು ಉದ್ಧಾರವಾಗಲು ಬಿಡುವುದಿಲ್ಲ ಎಂದು ಪಣ ತೊಟ್ಟ ಹಾಗಿದೆ. ಅಧಿಕಾರದಲ್ಲಿದ್ದಾಗ ತಮ್ಮ ಸ್ವಾರ್ಥಕ್ಕಾಗಿಯಾದರೂ ಸ್ವಲ್ಪ ಪಕ್ಷ ಸಂಘಟನೆ ಮಾಡಿದ್ದರೆ ಇವತ್ತು ಈ ಪರಿಸ್ಥಿತಿ ನೋಡಬೇಕಾಗಿರಲಿಲ್ಲ. ಇವರ ಪಟ್ಟಭದ್ರ ಮನೋಭಾವದಿಂದಾಗಿ ಕರಾವಳಿಯಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿದೆ ಎಂಬುದನ್ನು ಕಾಂಗ್ರೆಸ್ ವರಿಷ್ಠರಾದರೂ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಅವರೂ ಇಲ್ಲಿನ ದೊಣ್ಣೆ ನಾಯಕರ ಮಾತಿಗೆ ಮರುಳಾಗಿ ಅವಿಭಜಿತ ದಕ ಜಿಲ್ಲೆಯಲ್ಲಿ ಪಕ್ಷದ ಪರಿಸ್ಥಿತಿ ಬಗ್ಗೆ ಅವಲೋಕನ ನಡೆಸದೆ ಟಿಕೆಟ್ ಹಂಚಿಬಿಟ್ಟರೆ ಮೂರನೇ ಬಾರಿ ನಳಿನ್ ರನ್ನು ಲೋಕಸಭೆಗೆ ಕಳಿಸಲು ರಾಹುಲ್ ಗಾಂಧಿಯೇ ವೇದಿಕೆ ಸಜ್ಜು ಮಾಡಿದಂತಾಗುತ್ತದೆ.
ಪಕ್ಷವನ್ನು ತಳಮಟ್ಟದಿಂದ ಕಟ್ಟಬಲ್ಲ ಹೊಸ ಡಿಸಿಸಿ ಅಧ್ಯಕ್ಷರನ್ನು ನೇಮಿಸಿ ಸಮರೋಪಾದಿಯಲ್ಲಿ ಪಕ್ಷದ ಸಿದ್ಧಾಂತ ಪ್ರಚಾರ ಮಾಡುವ, ಕಾರ್ಯಕರ್ತರನ್ನು ರೂಪಿಸುವ, ಮೋದಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಯಾವುದೇ ಪ್ರಯೋಜನಕ್ಕಿಲ್ಲದ ಯುವ ಕಾಂಗ್ರೆಸ್ ಮತ್ತಿತರ ಘಟಕಗಳಿಗೆ ಸರ್ಜರಿ ಮಾಡಬೇಕು. ಅದು ಕೆಲವು ತಿಂಗಳುಗಳಲ್ಲಿ ಆಗುವ ಕೆಲಸ ಅಲ್ಲ. ಆದರೆ ಪ್ರಾರಂಭವಂತೂ ಆಗಲೇಬೇಕು. ಟಿಕೆಟ್ ಯಾರಿಗೆ ಎಂಬುದು ಏನಿದ್ದರೂ ಆ ಬಳಿಕದ ವಿಷಯ. ಸಂಘಟನೆಯೇ ಇಲ್ಲದ ಪಕ್ಷಕ್ಕೆ ಅಭ್ಯರ್ಥಿ ಯಾರಾದರೂ ಅದರಿಂದ ಯಾವುದೇ ವ್ಯತ್ಯಾಸ ಆಗದು.