ಸರ್ವಾಧಿಕಾರದ ಆಡಳಿತ
ಮಾನ್ಯರೇ,
ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಬಾಳಬೇಕಾದ ಭಾರತದ ನೆಲದಲ್ಲಿ ಕೋಮುವಾದದ ಬೆಂಕಿ ಹೊತ್ತಿಸುತ್ತಿರುವುದು ನಿಜಕ್ಕೂ ನಾಚಿಗೇಡಿನ ಸಂಗತಿ. ಸೆ.4 ರಂದು ಬಹ್ರಿಯಾಕ್ನಲ್ಲಿ ಉತ್ತರ ಪ್ರದೇಶದ ಸಚಿವ ಮುಕುಟ್ ಬಿಹಾರಿ ವರ್ಮಾ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ‘‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲಿದ್ದೇವೆ. ಯಾಕೆಂದರೆ, ಸುಪ್ರೀಂಕೋರ್ಟ್ ನಮ್ಮದು’’ ಎಂದು ಹೇಳಿಕೆ ನೀಡಿದ್ದಾರೆ. ಪತ್ರಕರ್ತರೊಬ್ಬರು ಇದುವರೆಗೂ ಸುಪ್ರೀಂಕೋರ್ಟ್ ತೀರ್ಪು ನೀಡಿಲ್ಲವೆಂದು ನೆನಪಿಸಿದಾಗ ಅದಕ್ಕೆ ಪ್ರತಿಯಾಗಿ ಸಚಿವರು, ‘‘ಹೌದು ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವುದು ಸತ್ಯ. ಆದರೆ ಸುಪ್ರೀಂಕೋರ್ಟ್ ನಮ್ಮದು, ದೇಶ ನಮ್ಮದು, ದೇವಾಲಯ ಕೂಡ ನಮ್ಮದೇ’’ ಎಂದು ಉತ್ತರಪ್ರದೇಶದಲ್ಲಿನ ತಮ್ಮ ಸರ್ವಾಧಿಕಾರಿ ಆಡಳಿತದ ಬಗ್ಗೆ ಹೇಳಿದ್ದಾರೆ. ರಾಮಮಂದಿರ-ಬಾಬರಿ ಮಸೀದಿಯ ಹೆಸರಿನಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷಗಳು ಯುವಜನತೆಯನ್ನು ಜಾತಿ, ಧರ್ಮದ ಅಫೀಮಿಗೆ ತಳ್ಳಿ, ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ರಾಮ ರಹೀಮ ಒಂದೇ ಎಂದು ನಂಬಿದ ನೆಲದಲ್ಲಿ ಕೋಮುವಾದ, ಮತೀಯವಾದಕ್ಕೆ ಅವಕಾಶ ಕೊಡದಂತೆ ಇಂದಿನ ಯುವ ಜನರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ.