ದಯಾಮರಣ ಬೇಕೇ..?
ಮಾನ್ಯರೇ,
ದೇಗುಲದಲ್ಲಿ ಕಾಣಿಕೆ ಸ್ವೀಕಾರ ನಿರ್ಬಂಧಿಸಿ ಇತ್ತೀಚಿಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರಿಂದ ತಮ್ಮ ಆರ್ಥಿಕ ಪರಿಸ್ಥಿತಿ ಕೆಟ್ಟಿದ್ದು, ಜೀವನ ನಿರ್ವಹಿಸುವುದಕ್ಕೆ ಆಗುತ್ತಿಲ್ಲ. ಹೀಗಾಗಿ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಕೋರಿ ಒಡಿಶಾದ ಖ್ಯಾತ ಪುರಿ ಜಗನ್ನಾಥ ದೇಗುಲದ ಅರ್ಚಕರೊಬ್ಬರು ಸುಪ್ರೀಂ ಕೋರ್ಟ್ಗೆ ಪತ್ರ ಬರೆದಿದ್ದಾರೆ. ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿಂದೆ ಸಹ ಅನೇಕರು ತಮಗೆ ಎದುರಾದ ಸಂಕಷ್ಟಗಳನ್ನು ಎದುರಿಸಲಾಗದೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ಸಲ್ಲಿಸಿ ಸಾವು ಸ್ವೀಕರಿಸುವುದು ಸರಿಯಲ್ಲ. ಯಾವುದೇ ಧರ್ಮದಲ್ಲಿ ಇಂತಹ ಕಲ್ಪನೆಗಳಿಗೆ ಮಾನ್ಯತೆ ಇಲ್ಲ. ಹೀಗಾಗಿ ಇಂತಹ ಪ್ರಕರಣಗಳ ಬಗ್ಗೆ ಕೇಂದ್ರ ಸರಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ. ಸಂಕಷ್ಟಗಳಿಂದ ನೊಂದ ಜನರು ಅಸಹಾಯಕರಾದಾಗ ಅವರಿಗೆ ಸಾಂತ್ವನ ನೀಡಿ ಬದುಕಿನ ಬಗ್ಗೆ ಭರವಸೆ ನೀಡಬೇಕಾದದ್ದು ಜರೂರಾಗಿ ಆಗಬೇಕಾದ ಕೆಲಸ. ಯಾರೇ ಆಗಲಿ, ತಮ್ಮ ಬದುಕನ್ನ್ನು ತಾವಾಗಿಯೇ ಬಲಿ ತೆಗೆದುಕೊಳ್ಳಬಾರದು. ಈ ಕುರಿತು ಸರಕಾರ, ನ್ಯಾಯಾಲಯ ಜೊತೆಗೆ ಪ್ರಜ್ಞಾವಂತ ನಾಗರಿಕರು ಕೂಡಾ ಚಿಂತಿಸಬೇಕಾಗಿದೆ.