ಸ್ವಾಗತಾರ್ಹ ನಿರ್ಧಾರ
ಮಾನ್ಯರೇ,
ಜಾತಿಯ ಹೆಸರಿನಲ್ಲಿರುವ ವಿದ್ಯಾರ್ಥಿನಿಲಯಗಳು ಕಂದಕ ಸೃಷ್ಟಿಸುತ್ತಿರುವುದನ್ನು ತಡೆಯಲು ಮುಂದಾಗಿರುವ ರಾಜ್ಯದ ಮೈತ್ರಿ ಸರಕಾರ ಎಲ್ಲಾ ತಾಲೂಕುಗಳಲ್ಲೂ ಮಾದರಿ ಸಾರ್ವಜನಿಕ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಮುಂದಾಗಿದ್ದು ಸ್ವಾಗತಾರ್ಹ ನಿರ್ಧಾರ.
ಪ್ರಸ್ತುತ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗಳು ಪ್ರತ್ಯೇಕ ಹಾಸ್ಟೆಲ್ಗಳನ್ನು ನಡೆಸುತ್ತಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಒಂದು ಕಡೆ, ಹಿಂದುಳಿದ ವಿದ್ಯಾರ್ಥಿಗಳು ಇನ್ನೊಂದು ಕಡೆ ಇರುತ್ತಾರೆ. ಇದರಿಂದಾಗಿ ಸರಕಾರವೇ ಜಾತಿಯ ಭಾವನೆ ಬಿತ್ತಿದಂತಾಗುತ್ತ್ತದೆ. ಇದನ್ನು ತಡೆಯಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವಿದ್ಯಾರ್ಥಿಗಳು ಎಂಬ ಭೇದಭಾವವಿಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ಹಾಸ್ಟೆಲ್ನಲ್ಲಿ ಪ್ರವೇಶಕ್ಕೆ ಅವಕಾಶ ಒದಗಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಮಾನತೆಯ ಭಾವನೆ ಮೂಡುತ್ತದೆ. ಇಂತಹ ಉದ್ದೇಶದಿಂದ ಎಲ್ಲ ತಾಲೂಕುಗಳಲ್ಲೂ ಮಾದರಿ ಸಾರ್ವಜನಿಕ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಸರಕಾರ ಮುಂದಾಗಿದ್ದು ಶ್ಲಾಘನೀಯ.
ರವಿಕುಮಾರ ಮಠಪತಿ, ವಡಗಾಂವ