ಈ ದುಂದುವೆಚ್ಚದ ಅಗತ್ಯವಿದೆಯೇ?
ಮಾನ್ಯರೇ,
ಚುನಾವಣೆಯ ಈ ಸಂದರ್ಭದಲ್ಲಿ ರಾಜಕೀಯ ನಾಯಕರು ದೇಶದೆಲ್ಲೆಡೆ ಹೋದಲ್ಲೆಲ್ಲ ಆಯಾ ಪಕ್ಷದ ಬೆಂಬಲಿಗರು ಅಭಿಮಾನಿಗಳು ಹಾಗೂ ಬಾಡಿಗೆ ಕಾರ್ಯಕರ್ತರು ತಮ್ಮ ನಾಯಕರ ಪರವಾಗಿ ಜೈಕಾರ ಹಾಕುತ್ತ ಸ್ವಾಗತಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅನೇಕರು ಬೃಹತ್ ಗಾತ್ರದ ಹೂವಿನ ಹಾರ ಹಾಗೂ ಕೆಲವು ಕಡೆಗಳಲ್ಲಿ ಸೇಬು ಹಣ್ಣಿನ ಮಾಲೆಯನ್ನು ಸಿದ್ಧಪಡಿಸಿ ಆಯಾ ಪಕ್ಷದ ಮುಖಂಡರಿಗೆ ತೊಡಿಸುತ್ತಿದ್ದಾರೆ. ಇನ್ನು ಕೆಲವೆಡೆಯಂತೂ ಇಂತಹ ಹಾರದ ಗಾತ್ರ ಎಷ್ಟು ದೊಡ್ಡದಿರುತ್ತದೆ ಎಂದರೆ ಅದನ್ನು ಕ್ರೇನ್ ಮೂಲಕ ಎತ್ತಿ ತರಲಾಗುತ್ತಿದೆ.
ಇಲ್ಲಿ ಯೋಚಿಸಬೇಕಾದ ಸಂಗತಿ ಎಂದರೆ ಒಂದೆಡೆ ಬರಗಾಲದಿಂದಾಗಿ ರಾಜ್ಯದ ಅನೇಕರು ಕುಡಿಯಲು ಶುದ್ಧ ನೀರು, ಆಹಾರವಿಲ್ಲದೆ ತತ್ತರಿಸುತ್ತಿದ್ದಾರೆ. ಮಗದೊಂದೆಡೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಲಂಗುಲಗಾಮಿಲ್ಲದೆ ಹಣ ಪೋಲು ಮಾಡುತ್ತಿದ್ದಾರೆ. ಇಂತಹ ದುಂದುವೆಚ್ಚದಿಂದಾಗಿ ರಾಜಕಾರಣಿಗಳು ಪ್ರತಿಷ್ಠೆ ಮೆರೆಯಬಹುದೇ ಹೊರತು ಅದರಿಂದಾಗಿ ಸಮಾಜಕ್ಕೆ ಯಾವ ಉಪಕಾರವೂ ಆಗದು. ಸಾಮಾನ್ಯವಾಗಿ ಯಾರಾದರೂ ಸ್ವಂತ ದುಡಿಮೆಯಿಂದ ಗಳಿಸಿದ ಹಣ ಖರ್ಚು ಮಾಡುವಾಗ ಬಹಳ ಜಾಗರೂಕತೆ ವಹಿಸುತ್ತಾರೆ. ಆದರೆ ಇಂದಿನ ಹೆಚ್ಚಿನೆಲ್ಲ ರಾಜಕಾರಣಿಗಳ ಆದಾಯ ಮೂಲ ಭ್ರಷ್ಟವಾಗಿರುವಾಗ ಇಂತಹವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?