‘ಬಾಲ್ಯವಿವಾಹ’ವೆಂಬ ಅನಿಷ್ಟ ನಿಲ್ಲಲಿ
ಮಾನ್ಯರೆ,
ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಜನರಲ್ಲಿನ ಅನಕ್ಷರತೆ ಮತ್ತು ಬಡತನದಿಂದಾಗಿ ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡಿದರೆ ಸಾಕು, ತಮ್ಮ ಜವಾಬ್ದಾರಿ ಕಳೆಯಿತು ಎಂಬ ಭಾವನೆಯಿಂದ ಬಾಲ್ಯ ವಿವಾಹಗಳನ್ನು ಒಂದು ಸಂಪ್ರದಾಯವೆಂಬಂತೆ ನಡೆಸುತ್ತಿದ್ದಾರೆ. ಇದು ನಿಜಕ್ಕೂ ದುರಂತವೇ ಸರಿ. ಕಳೆದ ಒಂದು ವರ್ಷದ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆಯುತ್ತಿರುವ 93ಕ್ಕೂ ಅಧಿಕ ಬಾಲ್ಯ ವಿವಾಹಗಳನ್ನು ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರವು ತಡೆದು ಮಕ್ಕಳನ್ನು ರಕ್ಷಣೆ ಮಾಡಿರುವುದು ಶ್ಲಾಘನೀಯ ಕಾರ್ಯ.
ಈ ಅನಿಷ್ಟ ಬಾಲ್ಯವಿವಾಹ ಪದ್ಧತಿಯಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದಲ್ಲದೆ ಹಲವು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭ ಧರಿಸಿದ ಹೆಣ್ಣು ಮಕ್ಕಳು ತಾಯಿಯಾಗುವ ಸಂದರ್ಭದಲ್ಲಿ ಅವರ ಶಾರೀರಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರಜ್ಞಾವಂತ ನಾಗರಿಕ ಸಮಾಜ ಎಲ್ಲೇ ಬಾಲ್ಯ ವಿವಾಹಗಳು ನಡೆಯುತ್ತಿದ್ದರೂ ಆ ವಿವಾಹ ನಡೆಯದಂತೆ ತಡೆದು ಅನಕ್ಷರಸ್ಥ ಪಾಲಕರಿಗೆ ಬಾಲ್ಯ ವಿವಾಹದಿಂದ ಮಕ್ಕಳ ಬದುಕಿನ ಮೇಲೆ ಬೀರುವ ದುಷ್ಪರಿಣಾಮದ ಬಗ್ಗೆ ಅರಿವು ಮಾಡಿಸಬೇಕು. ಜನತೆ ಎಚ್ಚೆತ್ತಾಗ ಮಾತ್ರ ಸಮಾಜಕ್ಕೆ ಸವಾಲಾಗಿರುವ ಈ ಅನಿಷ್ಟ ಪದ್ಧತಿ ನಿಂತು ಮಕ್ಕಳಿಗೆ ಹೊಸ ಜೀವನ ನೀಡಲು ಸಾಧ್ಯವಾಗುತ್ತದೆ.