ನಿಗೂಢವಾಗಿರುವ ಐಎಎಸ್ ಅಧಿಕಾರಿ ಸಾವಿನ ಪ್ರಕರಣ
ಮಾನ್ಯರೆ,
ಉತ್ತರ ಪ್ರದೇಶದಲ್ಲಿ ನಿಗೂಢವಾಗಿ ಮೃತಪಟ್ಟ ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ತಿವಾರಿ ಸಾವಿನ ಪ್ರಕರಣ ಒಂದು ವಾರ ಕಳೆದರೂ ನಿಗೂಢವಾಗಿ ಉಳಿದಿರುವುದು, ಹಲವಾರು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ. ಒಂದೆಡೆ ತಿವಾರಿ ಕುಟುಂಬ ಸದಸ್ಯರಿಂದ ಕೊಲೆ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಪ್ರಾಮಾಣಿಕ ಅಧಿಕಾರಿಗಳ ಮಟ್ಟ ಹಾಕುವ ಮಾಫಿಯಾ ಕರ್ನಾಟಕದಲ್ಲಿ ಪ್ರಬಲವಾಗಿದೆ ಎಂಬ ಇನ್ನೋರ್ವ ಐಎಎಸ್ ಅಧಿಕಾರಿ ವಿಜಯಕುಮಾರ ಅವರ ಹೇಳಿಕೆಯ ಜೊತೆಗೆ ತಿವಾರಿ ಅನುಮಾನಾಸ್ಪದ ಸಾವು ದೇಶಾದ್ಯಂತ ಸಂಚಲನ ಮೂಡಿಸಿದೆ.
ಇದೀಗ ಉತ್ತರ ಪ್ರದೇಶದ ಸರಕಾರ ಸಿಬಿಐಗೆ ಶಿಫಾರಸು ಮಾಡಿದೆ. ಇದೊಂದು ವೃತ್ತಿ ವೈಷಮ್ಯ ಕೊಲೆಯೋ ಅಥವಾ ವೈಯಕ್ತಿಕ ಕಾರಣದ ಕೊಲೆಯೋ ಎಂಬುದನ್ನು ಸಿಬಿಐ ತನಿಖೆಯಿಂದ ಭೇದಿಸಬೇಕಾಗಿದೆ.
ಈ ಪ್ರಕರಣ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ತುತ್ತಾಗಬಾರದು. ಬದಲಾಗಿ ಇಂತಹ ಪ್ರಕರಣಗಳಿಗೆ ಶೀಘ್ರ ನ್ಯಾಯ ದೊರಕಿದರೆ ಪ್ರಾಮಾಣಿಕ ಅಧಿಕಾರಿಗಳ ಆತ್ಮಸ್ಥೈರ್ಯ ಹೆಚ್ಚುತ್ತದೆ.
Next Story