ಬಾಲ ಕಾರ್ಮಿಕರ ಬಗ್ಗೆ ಜಾಗೃತಿ ಒಂದು ದಿನಕ್ಕೆ ಸೀಮಿತವಾಗದಿರಲಿ
ಮಾನ್ಯರೆ,
ಭಾರತ ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಬಾಲಕಾರ್ಮಿಕ ಪದ್ಧತಿ ಒಂದಾಗಿದೆ. ಶಾಲೆಯಲ್ಲಿ ಸ್ನೇಹಿತರ ಜೊತೆಗೆ ಶಿಕ್ಷಣ ಪಡೆದುಕೊಳ್ಳಬೇಕಾದ ಮಕ್ಕಳು ಕಿತ್ತು ತಿನ್ನುವ ಬಡತನ, ಪಾಲಕರ ಅನಕ್ಷರತೆಯಿಂದ ಬಾಲ ಕಾರ್ಮಿಕರಾದರೆ, ಮತ್ತೆ ಕೆಲವು ಅನಾಥ ನಿರ್ಗತಿಕ ಮಕ್ಕಳು ಹೊಟ್ಟೆಪಾಡಿಗೋಸ್ಕರ ಅನಿವಾರ್ಯವಾಗಿ ಹೊಟೇಲ್, ಬಾರ್, ಗ್ಯಾರೇಜ್, ಬಟ್ಟೆ ಅಂಗಡಿ, ಪಟಾಕಿ ಕಾರ್ಖಾನೆ, ಗಣಿಗಾರಿಕೆ, ಊದಿನ ಕಡ್ಡಿ ತಯಾರಿಕೆ ಹಾಗೂ ಮತ್ತಿತರ ಘಟಕಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇದು ನೋವಿನ ಸಂಗತಿ.
ನಮ್ಮ ಭಾರತದಲ್ಲೇ ಒಂದು ಕೋಟಿ ಬಾಲಕಾರ್ಮಿಕರು ಇರುವುದಾಗಿ ಸಮೀಕ್ಷೆ ಯೊಂದು ತಿಳಿಸಿದೆ. ಈ ಎಲ್ಲಾ ಬಾಲ ಕಾರ್ಮಿಕ ಮಕ್ಕಳು ಶಿಕ್ಷಣ, ಆರೋಗ್ಯ, ಮನರಂಜನೆ, ವಿರಾಮ, ಸ್ವಾತಂತ್ರ ಇನ್ನಿತರ ಮೂಲಭೂತ ಹಕ್ಕುಗಳಿಂದ ವಂಚಿತರಾಗಿ ಅತ್ಯಂತ ಕಷ್ಟಕರ ಮತ್ತು ನೋವಿನ ಜೀವನ ಸಾಗಿಸುತಿದ್ದಾರೆ. ಇನ್ನೊಂದೆಡೆ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮಾದಕ ವ್ಯಸನ, ಭಿಕ್ಷಾಟನೆ, ಕಳ್ಳತನ ಮತ್ತು ವೇಶ್ಯಾವಾಟಿಕೆ ಯಂತಹ ಅಪಾಯಕಾರಿ ಚಟುವಟಿಕೆಗಳಲ್ಲಿ ಬಳಸುತ್ತಿರುವುದು ಖೇದಕರ.
ಈ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಹತ್ತು ಹಲವು ಕಾಯ್ದೆಗಳು ಜಾರಿಯಲ್ಲಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಸರಕಾರ, ರಾಜಕಾರಣಿಗಳು ಹಾಗೂ ಇನ್ನಿತರ ಸಂಘಟನೆಗಳಿಗೆ ‘ಬಾಲಕಾರ್ಮಿಕರ ವಿರೋಧಿ ದಿನ’ದಂದು ಮಾತ್ರ ಬಾಲ ಕಾರ್ಮಿಕ ಮಕ್ಕಳು ನೆನಪಾಗುತ್ತಿರುವುದು ವಿಷಾದಕರ. ಬಾಲ ಕಾರ್ಮಿಕರ ದುಡಿತ ತಪ್ಪಿಸಲು ಕಠಿಣ ಕಾಯ್ದೆಯ ಮುಖಾಂತರ ಜಾಗೃತರಾಗಬೇಕಾದುದು ಇಂದಿನ ಅಗತ್ಯವಾಗಿದೆ. ಅನಾಥ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ಮುಕ್ತಿಗೊಳಿಸಿ ಈ ಮಕ್ಕಳ ಭವಿಷ್ಯದ ಕುರಿತು ವಿಶೇಷ ಕಾಳಜಿವಹಿಸಿ ಹಲವು ಮೂಲಭೂತ ಆವಶ್ಯಕತೆಗಳನ್ನು ಸರಕಾರ ಒದಗಿಸಬೇಕು. ಜೊತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಆಗ ಮಾತ್ರ ಬಾಲ ಕಾರ್ಮಿಕ ಮುಕ್ತ ಭಾರತವನ್ನು ಸ್ಥಾಪಿಸಲು ಸಾಧ್ಯವಾಗಬಹುದು.