ಪ್ರವೇಶ ತಾರತಮ್ಯ ಇನ್ನೂ ನಿಲ್ಲದೇ?
ಮಾನ್ಯರೆ,
ಶಾಲಾ ತರಗತಿಗಳು ಆರಂಭವಾಗಿ ಮೂರು ತಿಂಗಳಾಗುತ್ತಾ ಬರುತ್ತಿದೆ. ಆದರೆ ಇನ್ನೂ ಅನೇಕ ಮಂದಿ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಅವಕಾಶ ಸಿಗುತ್ತಿಲ್ಲ. ಬೆಂಗಳೂರು ಸೇರಿ ಅನೇಕ ಕಡೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾದ ಮಕ್ಕಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗುತ್ತಿವೆ.
ಮೊನ್ನೆಯಷ್ಟೇ ಬೆಂಗಳೂರಿನ ಮಲ್ಲೇಶ್ವರದ ಖಾಸಗಿ ಶಾಲೆಯ 6ನೆ ತರಗತಿಯಲ್ಲಿರುವ ಆರ್ಟಿಇಯಡಿ ದಾಖಲಾದ ವಿದ್ಯಾರ್ಥಿಗೆ ತರಗತಿಗೆ ಹಾಜರಾಗಲು ಬಿಡುತ್ತಿಲ್ಲ ಎಂಬ ವಿಚಾರ ಬಯಲಿಗೆ ಬಂದಿದೆ. ಇಂತಹ ಪ್ರಕರಣಗಳು ರಾಜ್ಯದ ವಿವಿಧೆಡೆ ನಡೆಯುತ್ತಿದೆ. ಕೆಲ ಶಾಲೆಗಳಲ್ಲಿ ಆರ್ಟಿಇಯಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಬಳಿ ಹೆಚ್ಚುವರಿ ಶಾಲಾ ಶುಲ್ಕವನ್ನು ಕಟ್ಟುವಂತೆ ಒತ್ತಡ ಹೇರಲಾಗುತ್ತಿದೆ. ಶುಲ್ಕ ಪಾವತಿಸದೆ ಶಾಲೆಯ ಆವರಣದೊಳಗೆ ಪ್ರವೇಶಿಸಬಾರದೆನ್ನುವುದು ದಬ್ಬಾಳಿಕೆಯಲ್ಲವೇ?
ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯ ಬಗ್ಗೆ ಗಮನ ನೀಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
Next Story