ಐದು ಕೋಟಿ ರೂ. ದಂಡ ಕಟ್ಟದ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್
ಎನ್ಜಿಟಿ ಆದೇಶ ಪಾಲಿಸದ ಗುರೂಜಿ
ಹೊಸದಿಲ್ಲಿ, ಮಾ.11: ವಿಶ್ವ ಸಂಸ್ಕೃತಿ ಉತ್ಸವಕ್ಕೆ ಸಂಬಂಧಿಸಿ ಐದು ಕೋಟಿ ರೂ. ದಂಡ ಕಟ್ಟುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ನೀಡಿರುವ ಆದೇಶದ ವಿರುದ್ಧ ಸಡ್ಡು ಹೊಡೆದಿರುವ ಸಂಘಟಕರು ಶುಕ್ರವಾರ ಬೆಳಗ್ಗಿನ ತನಕ ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ದಂಡ ಕಟ್ಟದಿದ್ದರೆ ಶ್ರೀ ರವಿಶಂಕರ್ ಗುರೂಜಿ ಅವರ 'ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಆಯೋಜಿಸಿರುವ 'ವಿಶ್ವ ಸಂಸ್ಕೃತಿ ಉತ್ಸವ'ಕ್ಕೆ ನೀಡಲಾಗಿರುವ ಅನುಮತಿಯನ್ನು ರದ್ದುಗೊಳಿಸಲಾಗುವುದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಎಚ್ಚರಿಸಿದ್ದು, ಮುಂದಿನ ಬೆಳವಣಿಗೆ ಕುತೂಹಲ ಕೆರಳಿಸಿದೆ.
ಸಂಜೆ ಐದು ಗಂಟೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ಸಂಸ್ಕೃತಿ ಉತ್ಸವ'ಕ್ಕೆ ಚಾಲನೆ ನೀಡಲಿದ್ದಾರೆ.
ಮಾ.11ರಿಂದ 13ರ ವರೆಗೆ ನಡೆಯಲಿರುವ ಕಾರ್ಯಕ್ರಮಕ್ಕಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಮುನಾ ದಂಡೆಯ ಮೇಲೆ ಬೃಹತ್ ವೇದಿಕೆ ಸಿದ್ಧಪಡಿಸಿದ್ದು, ಟೆಂಟ್ ಮತ್ತು ತಾತ್ಕಾಲಿಕ ಸೇತುವೆ, ರಸ್ತೆಗಳನ್ನು ನಿರ್ಮಾಣ ಮಾಡಿದೆ.
ಯಮುನಾ ನದಿ ತೀರದ ಒಂದು ಸಾವಿರ ಎಕ್ರೆ ಪ್ರದೇಶದಲ್ಲಿ ಮೂರು ದಿನಗಳ ಉತ್ಸವ ನಡೆಯಲಿದ್ದು, ಇದರಿಂದಾಗಿ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಪರಿಸರವಾದಿಗಳು ಎನ್ಜಿಟಿ ಮೊರೆ ಹೋಗಿದ್ದಾರೆ. ಎನ್ಜಿಟಿಯು ಉತ್ಸವವನ್ನು ಆಯೋಜಿಸಿರುವ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ವಿರುದ್ಧ ಕಾನೂನಿನ ಚಾಟಿ ಬೀಸಿದೆ.
ರಾಜ್ಯಸಭೆಯಲ್ಲಿ ಪ್ರತಿಧ್ವನಿ: ಎನ್ ಜಿಟಿ ಆದೇಶವನ್ನು ಪ್ರಶ್ನಿಸಿರುವ ಆರ್ಟ್ ಆಫ್ ಲಿವಿಂಗ್ ಪೌಂಡೇಶನ್ ವಿರುದ್ಧ ರಾಜ್ಯಸಭೆಯಲ್ಲಿ ಇಂದು ವಿಪಕ್ಷ ಸದಸ್ಯರು ಗದ್ದಲವನ್ನುಂಟು ಮಾಡಿದರು.
ಯಮುನಾ ನದಿ ತೀರದಲ್ಲಿ ವಿಶ್ವ ಸಂಸ್ಕೃತಿ ಉತ್ಸವದಿಂದಾಗಿ ಪರಿಸರ ಮೇಲೆ ಹಾನಿಯಾಗುತ್ತದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ(ಎನ್ ಜಿಟಿ) ಆದೇಶವನ್ನು ರವಿಶಂಕರ್ ಗುರೂಜಿ ಪ್ರಶ್ನಿಸಿದ್ದಾರೆ. ಕಾನೂನಿಗಿಂತ ರವಿಶಂಕರ್ ಗುರೂಜಿ ದೊಡ್ಡವರಾ ? ಎಂದು ಜೆಡಿಯುನ ಶರದ್ ಯಾದವ್ ಪ್ರಶ್ನಿಸಿದರು.