ಶೀಲಾ ದೀಕ್ಷಿತ್ ಉ.ಪ್ರ. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ, ಪ್ರಚಾರ ನೇತೃತ್ವ ಪ್ರಿಯಾಂಕಾಗೆ?
ಪ್ರಶಾಂತ್ ಕಿಶೋರ್ ಐಡಿಯ
ನವದೆಹಲಿ : ಮಾರ್ಚ್ 2017ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಿಂತ ಮುಂಚೆಯೇ ಕಾಂಗ್ರೆಸ್ ಪಕ್ಷವು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರನ್ನುಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸುವು ಎಲ್ಲಾ ಸಾಧ್ಯತೆಗಳು ಇವೆಯೆಂದೂ ರಾಜ್ಯದಲ್ಲಿ ಚುನಾವಣಾ ಪ್ರಚಾರದ ನೇತೃತ್ವವನ್ನು ಪ್ರಿಯಾಂಕಾ ಗಾಂಧಿ ವಹಿಸಲಿದ್ದಾರೆಂದೂ ಹೇಳಲಾಗುತ್ತಿದೆ.
ಉತ್ತರ ಭಾರತವನ್ನು ನಾಲ್ಕು ದಶಕಗಳ ಕಾಲ ಆಳಿ27 ವರ್ಷಗಳ ಹಿಂದೆ ತನ್ನ ಸ್ಥಾನ ಕಳೆದುಕೊಂಡ ಕಾಂಗ್ರೆಸ್ ಪಕ್ಷವನ್ನು ಮತ್ತೆ ಉತ್ತರ ಭಾರತದಲ್ಲಿ ಪ್ರಮುಖ ಪಕ್ಷವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರಚಿಸಲು ಪಕ್ಷ ನೇಮಿಸಿದ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೀಡಿದ ಪ್ರಥಮ ಸಲಹೆ ಇದೆಂದು ಬಣ್ಣಿಸಲಾಗುತ್ತಿದೆ. ಕಿಶೋರ್ ಗುರುವಾರವಷ್ಟೇ ಲಕ್ನೌ ತಲುಪಿದ್ದು ತಮ್ಮ ಕಾರ್ಯವನ್ನು ಆರಂಭಿಸಿದ್ದಾರೆ.
ಗಾಂಧಿ ಹೆಸರೊಂದೇ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸಲು ಸಾಕಾಗದು ಎಂದು ಕಾಂಗ್ರೆಸ್ಸಿಗೆ ಈಗ ಅರಿವಾಗಿದ್ದು ಬಿಹಾರದಲ್ಲಿ ನಿತೀಶ್ ಕುಮಾರ್ನೇತೃತ್ವದ ಮಹಾ ಮೈತ್ರಿ ಕೂಟದ ವಿಜಯದ ರೂವಾರಿಯೆಂದೇ ಹೇಳಲಾದ ಪ್ರಶಾಂತ್ ಕಿಶೋರ್ರನ್ನು ಕಾಂಗ್ರೆಸ್ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಅವರೀಗಾಗಲೇ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ ಹಲವು ಪ್ರಮುಖರೊಂದಿಗೆಗಂಟೆಗಳ ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ. ಪಕ್ಷದ ರಾಜ್ಯ ಘಟಕದಲ್ಲಿನ ಆಂತರಿಕ ಕಲಹಗಳಿಂದ ಕಂಗಾಲಾಗಿರುವ ಕಾಂಗ್ರೆಸ್ ನಾಯಕರು ಒಂದಾಗಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ನೇಮಿಸಿದ ರಾಜಕೀಯ ತಂತ್ರಜ್ಞನ ಮಾತನ್ನು ಕೇಳಲು ಸಿದ್ಧರಾಗಿದ್ದಾರೆನ್ನಲಾಗುತ್ತಿದೆ.
‘ನಾವು ಬಿಜೆಪಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ’ ಎಂಬ ಆತ್ಮವಿಶ್ವಾಸದೊಂದಿಗೆ ಎಲ್ಲಾ 403 ಕ್ಷೇತ್ರಗಳಲ್ಲಿ 20 ಮಂದಿ ಸದಸ್ಯರ ಪ್ರಚಾರ ಸಮಿತಿಯನ್ನು ರಚಿಸಬೇಕೆಂಬ ಸಲಹೆಯೂ ಕಿಶೋರ್ರಿಂದ ಬಂದಿದೆಯೆನ್ನಲಾಗುತ್ತಿದೆ.