ಸಚಿವ ಗಿರಿರಾಜ್ ಸಿಂಗ್ರಿಂದ ಪಕ್ಷದಲ್ಲಿ ಗುಂಪುಗಾರಿಕೆಗೆ ಉತ್ತೇಜನ:ಬಿಜೆಪಿ ಸಂಸದ
ಬಲಿಯಾ(ಉ.ಪ್ರ.),ಎ.1: ತನ್ನ ಪಕ್ಷದ ಸಹೋದ್ಯೋಗಿ ಹಾಗೂ ಕೇಂದ್ರದ ಸಹಾಯಕ ಸಚಿವ ಗಿರಿರಾಜ್ ಸಿಂಗ್ ಅವರು ಪಕ್ಷದಲ್ಲಿ ಗುಂಪುಗಾರಿಕೆಯನ್ನು ಉತ್ತೇಜಿಸುತ್ತಿದ್ದಾರೆ. ಅವರು ಬಿಹಾರದಲ್ಲಿ ಮಾಡಿದ್ದನ್ನೇ ಉತ್ತರ ಪ್ರದೇಶದಲ್ಲಿಯೂ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಸಲೇಮ್ಪುರದ ಬಿಜೆಪಿ ಸಂಸದ ರವೀಂದ್ರ ಕುಶ್ವಾಹ ಅವರು ಆರೋಪಿಸಿದ್ದಾರೆ.
ಗುರುವಾರ ರಾತ್ರಿ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ತಾನು ಹಲವುಬಾರಿ ವಿನಂತಿಸಿಕೊಂಡಿದ್ದರೂ ಕಿರು,ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಹಾಯಕ ಸಚಿವರು ತನ್ನ ಮತಕ್ಷೇತ್ರಕ್ಕೆ ಭೇಟಿ ನೀಡಿರಲಿಲ್ಲ. ಆದರೆ ಬುಧವಾರ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಲ್ಲಿಗೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು. ಸಚಿವರ ಭೇಟಿಯ ಬಗ್ಗೆ ಗೊತ್ತಾದಾಗ ತಾನು ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದೆ, ಆದರೆ ಅವರು ಫೋನನ್ನು ಎತ್ತಲೇ ಇಲ್ಲ ಎಂದು ದೂರಿದರು.
ಕುಶ್ವಾಹ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಿಂಗ್,ತಾನು ಸಂಸ್ಥೆಯೊಂದರ ಆಹ್ವಾನದ ಮೇರೆಗೆ ಸಿಕಂದರ್ಪುರಕ್ಕೆ ಭೇಟಿ ನೀಡಿದ್ದೆ. ತನ್ನ ಭೇಟಿಯ ಬಗ್ಗೆ ಸಂಸದರಿಗೆ ಮಾಹಿತಿ ನೀಡುವುದು ಸಂಸ್ಥೆಯ ಕರ್ತವ್ಯವಾಗಿತ್ತು ಎಂದರು.