ಮೂವರು ಕೇಂದ್ರ ಸಚಿವರ ತಿಂಗಳ ಕಾಫಿ, ತಿಂಡಿಯ ಬಿಲ್ 4 ಲಕ್ಷ ರೂಪಾಯಿ !
ಬೆಂಗಳೂರು, ಎ.13:ವಿಮಾನ ನಿಲ್ದಾಣದಲ್ಲಿ ಕೇಂದ್ರದ ಮೂವರು ಸಚಿವರುಗಳ ಚಹಾ, ಕಾಫಿ ಮತ್ತು ತಿಂಡಿಗಾಗಿ 3 ಲಕ್ಷ ರೂ.ನಿಂದ 4 ಲಕ್ಷ ರೂ. ತನಕ ಖರ್ಚಾಗುತ್ತದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ, ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಸರ್ಸ್ ಖಾತೆ ಸಚಿವ ಅನಂತ ಕುಮಾರ್,ಆಹಾರ ಮತ್ತು ನಾಗರಿಕ ಯಾನ ರಾಜ್ಯ ಸಚಿವ ಜಿಎಂ ಸಿದ್ದೇಶ್ವರ ಅವರು ಚಹಾ, ಕಾಫಿ, ಉಪಹಾರಕ್ಕಾಗಿ ಪ್ರತಿ ತಿಂಗಳು 4 ಲಕ್ಷ ರೂ. ತನಕ ಬಿಲ್ ಪಾವತಿಯಾಗುತ್ತಿದೆ ಎಂದು ತಿಳಿದು ಬಂದಿದೆ.
ಒಂದು ವರದಿಯ ಪ್ರಕಾರ ಒಬ್ಬ ಸಚಿವರು ಒಂದೇ ಬಾರಿಗೆ ಐದು ಕಾಫಿ , ಆರು ಗ್ಲಾಸ್ ಜ್ಯೂಸ್ , ಹಲವು ಸ್ಯಾಂಡ್ ವಿಚ್ ಗಳನ್ನು ತಿಂದು ಬಳಿಕ ಆರು ಬಾಟಲ್ ನೀರು ಕುಡಿದು ಸುಧಾರಿಸಿಕೊಂಡಿದ್ದಾರೆ ! ಇದು ಮನುಷ್ಯರಿಗೆ ಅಸಾಧ್ಯವಾದ ವಿಷಯ. ಅಲ್ಲದೆ ಕೇಂದ್ರ ಸಚಿವರು ಸಾಮಾನ್ಯವಾಗಿ ಕೊನೆ ಗಳಿಗೆಯಲ್ಲಿ ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ಏರುತ್ತಾರೆ. ಅವರಿಗೆ ಅಲ್ಲಿ ಕೂತು ಟೀ , ಕಾಫಿ , ತಿಂಡಿ ತಿನ್ನುವ ವ್ಯವಧಾನವೂ ಇರುವುದಿಲ್ಲ.
ಹೀಗಾಗಿ ಈ ವಿಷಯದಲ್ಲಿ ವಿಮಾನ ನಿಲ್ದಾಣದ ಶಿಷ್ಟಾಚಾರ ವಿಭಾಗದ ಅಧಿಕಾರಿಗಳ ಮೇಲೆ ಸಂಶಯ ವ್ಯಕ್ತವಾಗಿದೆ. ಸಚಿವರ ಹೆಸರಲ್ಲಿ ಬೇಕಾ ಬಿಟ್ಟಿ ಬಿಲ್ ಮಾಡಲಾಗಿದೆ ಎಂಬ ಗುಮಾನಿ ಇದೆ.
ದಿಲ್ಲಿ ಸೇರಿದಂತೆ ದೇಶದ ನಗರಗಳಿಗೆ ತೆರಳುವಾಗಿ ತಾನು ವಿಶ್ರಾಂತಿಗಾಗಿ ವಿಮಾನ ನಿಲ್ದಾಣದ ಕೊಠಡಿಯನ್ನು ಉಪಯೋಗಿಸಿರುವೆನು. ಯಾವುದೇ ರೀತಿಯ ತಿಂಡಿ, ತಿನಸು ಮತ್ತು ಪಾನೀಯ ಸೇವಿಸಿಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಸ್ಪಷ್ಟಪಡಿಸಿದ್ದಾರೆ. ಸಚಿವ ಸದಾನಂದ ಗೌಡ ತನಿಖೆಗೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.