ನಾಗಪುರದಲ್ಲಿ ಬಜರಂಗಿಗಳಿಂದ ಕನ್ಹಯ್ಯಗೆ ಚಪ್ಪಲಿಯೆಸೆತ, ಕಲ್ಲುತೂರಾಟ
ನಾಗಪುರ,ಎ.14:ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಜೆಎನ್ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಮೇಲೆ ಶಂಕಿತ ಬಜರಂಗದಳ ಕಾರ್ಯಕರ್ತರು ಕಲ್ಲುತೂರಿದ ಹಾಗೂ ಚಪ್ಪಲಿಯೆಸೆದ ಘಟನೆ ಗುರುವಾರ ನಡೆದಿದೆ. ಆದರೆ ಕನ್ಹಯ್ಯಾ ಯಾವುದೇ ಹಾನಿಗೊಳಗಾಗದೆ ಪಾರಾಗಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದಾರೆ.
ಪ್ರಗತಿ ವಿದ್ಯಾರ್ಥಿಗಳ ಯುವ ಕ್ರಿಯಾ ಸಮಿತಿಯ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮಕ್ಕೆ ಕನ್ಹಯ್ಯೆ ಕುಮಾರ್ ಆಹ್ವಾನಿತರಾಗಿದ್ದರು. ಹೊಸದಿಲ್ಲಿಯಿಂದ ಕನ್ಹಯ್ಯಾ ನಾಗಪುರ ವಿಮಾನನಿಲ್ದಾಣಕ್ಕೆ ಆಗಮಿಸಿದಾಗ ಹೊರಗೆ ಜಮಾಯಿಸಿದ್ದ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆನಂತರ ಅವರು ಅಂಬೇಡ್ಕರ್ಗೆ ಶ್ರದ್ಧಾಂಜಲಿ ಅರ್ಪಿಸಲು ಅವರು ಐತಿಹಾಸಿಕ ದೀಕ್ಷಾಭೂಮಿಗೆ ತೆರಳಿದಾಗಲೂ ಘೋಷಣೆಗಳನ್ನು ಕೂಗಿದರು.
ಬಳಿಕ ಪ್ರಗತಿ ವಿದ್ಯಾರ್ಥಿಗಳ ಯುವ ಕ್ರಿಯಾ ಸಮಿತಿಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದಾಗ ಶಂಕಿತ ಬಜರಂಗದಳ ಕಾರ್ಯಕರ್ತರು ಅವರ ಮೇಲೆ ಕಲ್ಲೆಸೆದರು. ಆದರೆ ಅಲ್ಲಿದ್ದ ಭದ್ರತಾ ಅಧಿಕಾರಿಗಳು ಬೆಂಗಾವಲು ಪಡೆ ಕನ್ಹಯ್ಯೊ ಅವರನ್ನು ಪಾರು ಮಾಡಿತು.
ಬಜರಂಗದಳ ಕಾರ್ಯಕರ್ತರ ಗುಂಪು ‘ಕನ್ಹಯ್ಯ ಕುಮಾರ್ ಮುರ್ದಾಬಾದ್’ ಇತ್ಯಾದಿ ಘೋಷಣೆಗಳನ್ನು ಕೂಗಿದರು. ಕೂಡಲೇ ಧಾವಿಸಿದ ಪೊಲೀಸರು ಪ್ರತಿಭಟನಕಾರರನ್ನು ಸಭಾಭವನದಿಂದ ಹೊರಗೆಕಳುಹಿಸಿದರು. ಈ ಸಂದರ್ಭದಲ್ಲಿ ಬಜರಂಗದಳ ಕಾರ್ಯಕರ್ತನೊಬ್ಬ ಕನ್ಹಯ್ಯಾರ ಮೇಲೆ ಚಪ್ಪಲಿಯೆಸೆದಿದ್ದು, ಅದು ಗುರಿತಪ್ಪಿ ಬಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.