ಶಾಸಕಿಯಿಂದ ಕೊಲೆ ಆರೋಪಿ ಪುತ್ರನ ವಿಳಾಸವನ್ನು ಬಿಹಾರ ಪೊಲೀಸರು ಪಡೆದಿದ್ದು ಹೀಗೆ
ಸರಕಾರದಿಂದ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ
ಗಯಾ : ಗಯಾ ಪೊಲೀಸರ ನಿರಂತರ ಒತ್ತಡಕ್ಕೆ ಮಣಿದು ಬಿಹಾರದ ಜೆಡಿ(ಯು) ವಿಧಾನಪರಿಷತ್ ಸದಸ್ಯೆ ಮನೊರಮಾ ದೇವಿ ಕೊನೆಗೂ 12ನೇ ತರಗತಿಯವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದ ಆರೋಪವನ್ನು ಹೊತ್ತ ತನ್ನ ಪುತ್ರ ರಾಕಿ ಯಾದವ್ ಇರುವ ಸ್ಥಳವನ್ನು ಪೊಲೀಸರಿಗೆ ಮಂಗಳವಾರ ಬೆಳಿಗ್ಗೆ ತೋರಿಸಿದರು. ರಾಕಿ ವಸ್ತ್ ಪುರದಲ್ಲಿರುವ ತನ್ನ ತಂದೆ ಬಿಂಡಿ ಯಾದವ್ ಒಡೆತನದ ಡೈರಿ ಫಾರ್ಮ್ ನಲ್ಲ ಅಡಗಿಕೊಂಡಿದ್ದನು. ಮೇ 7ರ ಸಂಜೆ ಆದಿತ್ಯ ಸಚ್ ದೇವನನ್ನು ರಾಕಿ ಗುಂಡಿಟ್ಟು ಕೊಂದಿದ್ದನು.
ಸೋಮವಾರ ಸಂಜೆ ನಗರ ಎಸ್ಪಿ ಅವಕಾಶ್ ಕುಮಾರ್ ನೇತೃತ್ವದಲ್ಲಿವಿಶೇಷ ತನಿಖಾ ದಳದ ಅಧಿಕಾರಿಗಳು ಪರಿಷತ್ ಸದಸ್ಯೆಯ ಎಪಿ ಕಾಲನಿ ನಿವಾಸಕ್ಕೆ ದಾಳಿ ನಡೆಸಿದಾಗ ಅಲ್ಲಿ ವಿದೇಶಿ ಮದ್ಯ ಬಾಟಲಿಗಳ ಸಹಿತ ಹಲವಾರು ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿದ್ದವು. ಸರಕಾರ ತಮಗೆ ರಾಕಿಯನ್ನು ಬಂಧಿಸಲು ಪೂರ್ಣ ಅಧಿಕಾರ ನೀಡಿದೆಯೆಂದು ಆರಂಭದಿಂದಲೂ ಪೊಲೀಸರು ಶಾಸಕಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದರು.
ಆರಂಭದಲ್ಲಿ ಶಾಸಕಿ ತನಗೆ ತನ್ನ ಪುತ್ರ ಎಲ್ಲಿದ್ದಾನೆಂದು ಗೊತ್ತಿಲ್ಲವೆಂದು ವಾದಿಸಿದರೂ ಪೊಲೀಸರು ಬರಿಕೈಯಲ್ಲಿ ವಾಪಸಾಗುವುದಿಲ್ಲವೆಂದು ಹೇಳಿದರಲ್ಲದೆ, ಕ್ರಿಮಿನಲ್ ಒಬ್ಬನಿಗೆ ರಕ್ಷಣೆ ನೀಡಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗುವುದು ಎಂದು ಎಚ್ಚರಿಸಿದರು. ಆಕೆಯ ಪತಿ ಇದೇ ಆರೋಪದ ಮೇಲೆಬಂಧಿತರಾಗಿದ್ದಾರೆ.
ಪೊಲೀಸರ ಬೆದರಿಕೆ ಕೆಲಸ ಮಾಡಿದ್ದುಒತ್ತಡಕ್ಕೆ ಮಣಿದು, ಹಿತೈಷಿಗಳ ಹಾಗೂ ವಕೀಲರ ಸಲಹೆಯ ಮೇರೆಗೆ ಆಕೆ ತನ್ನ ಪುತ್ರ ಎಲ್ಲಿದ್ದಾನೆಂದು ಕೊನೆಗೂ ಬಾಯ್ಬಿಟ್ಟಳು. ರಾಕಿ ಯಾವತ್ತಿದ್ದರೂ ಪೊಲೀಸರಿಗೆ ಶರಣಾಗಬೇಕೆಂದೂ ಆತ ಶರಣಾಗಲು ವಿಳಂಬ ಮಾಡಿದಷ್ಟು ಕುಟುಂಬ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದೆಂದು ಅವರು ಶಾಸಕಿಗೆ ಮನದಟ್ಟು ಮಾಡಿದರು.
ರಾಕಿಯ ಬಂಧನದ ವೇಳೆಗೆ ಆತ ಸಚ್ ದೇವನನ್ನು ಗುಂಡಿಕ್ಕಲು ಬಳಸಿದ ಬೆರೆಟ್ಟಾಪಿಸ್ತೂಲನ್ನು ಪೊಲೀಸರು ವಶಪಡಿಸಿಕೊಂಡರು.