ಸಿಂಹಸ್ಥ ಕುಂಭದಲ್ಲಿ ಸನ್ಯಾಸಿ ಅಖಾಡೆ ಚುನಾವಣೆ: ಸನ್ಯಾಸಿಗಳ ನಡುವೆ ಮಾರಣಾಂತಿಕ ಘರ್ಷಣೆ!
ಉಜ್ಜೈನಿ, ಮೇ 12: ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ಥ ಕುಂಭದಲ್ಲಿ ಇಂದು ಇಲ್ಲಿ ಅಹ್ವಾನ ಅಖಾಡೆಯ ಕೆಲವು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಾರಣಾಂತಿಕ ಸಂಘರ್ಷ ನಡೆದಿದ್ದು ಆರು ಮಂದಿ ಸನ್ಯಾಸಿಗಳಿಗೆ ಗಾಯವಾಗಿರುವುದಾಗಿ ವರದಿಯಾಗಿದೆ. ಪೊಲೀಸರು ಈ ಘಟನೆಗೆ ಸಂಬಂಧಿಸಿ ಇಬ್ಬರು ಸನ್ಯಾಸಿಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ತೀರ್ಥಯಾತ್ರಿಗಳ ಪ್ರಕಾರ ಸನ್ಯಾಸಿಗಳ ಗಲಾಟೆಯಲ್ಲಿ ಅವರಿಗೆ ಗುಂಡುಹಾರಾಟದ ಸದ್ದು ಕೇಳಿಸಿದೆ. ಆದರೆ ಪೊಲೀಸರು ಇದನ್ನು ದೃಢೀಕರಿಸಿಲ್ಲ ಎಂದು ವರದಿಗಳು ತಿಳಿಸಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕ(ಎಎಸ್ಪಿ) ಮನೀಷ್ ಖತ್ರಿ ಸನ್ಯಾಸಿಗಳು ಗಲಾಟೆಯಲ್ಲಿ ತ್ರಿಶೂಲವನ್ನು ಕೂಡಾ ಪ್ರಯೋಗಿಸಿದ್ದಾರೆ. ಇದರಿಂದ ಇಬ್ಬರು ಸನ್ಯಾಸಿಗಳು ತೀವ್ರಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಅದೇವೇಳೆ ಸಾಮಾನ್ಯಗಾಯಗಳಾದ ಇಬ್ಬರು ಸನ್ಯಾಸಿಗಳಿಗೆ ಅಖಾಡದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಸಂಘರ್ಷದಲ್ಲಿ ರಾಹುಲ್ ಪುರಿ(25) ರಾಜೇಶ್ಪುರಿ(62,)ಭೋಲಾಪುರಿ(70,) ಸನಾತನ್ಪುರಿ(30) ನಾಗೇಂದ್ರ ಪುರಿ(40), ಮತ್ತು ರಾಘವ ಪುರಿ(35) ಎಂಬವರು ಗಾಯಗೊಂಡಿದ್ದಾರೆಂದು ಎಎಸ್ಪಿ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸನ್ಯಾಸಿಗಳನ್ನು ಬಂಧಿಸಲಾಗಿದೆ. ಜೊತೆಗೆ ಘರ್ಷಣೆ ವೇಳೆ ಗುಂಡುಹಾರಾಟ ನಡೆದಿದೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು. ಪ್ರಕರಣ ದಾಖಲಿಸಿಕೊಂಡು ವಿಸ್ತಾರವಾಗಿ ತನಿಖೆನಡೆಸಲಾಗುವುದೆಂದು ಪೊಲೀಸ್ ಅಧಿಕಾರಿ ತಿಳಿಸಿರುವುದಾಗಿ ವರದಿಯಾಗಿದೆ.