ಖುಲಾಯಿಸಿದ ಅಮರ್ ಸಿಂಗ್ ಅದೃಷ್ಟ ರಾಜ್ಯಸಭಾ ಸದಸ್ಯತ್ವಕ್ಕೆ ಎಸ್ಪಿಯಿಂದ ನಾಮಕರಣ
ಲಕ್ನೋ,ಮೇ 17: ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ ಯಾದವ್ ಅವರ ಹಳೆಯ ಬಂಟ ಅಮರ ಸಿಂಗ್ ಸೇರಿದಂತೆ ರಾಜ್ಯಸಭಾ ಸದಸ್ಯತ್ವಕ್ಕೆ ತನ್ನ ಏಳು ಅಭ್ಯರ್ಥಿಗಳ ಹೆಸರುಗಳನ್ನು ಸಮಾಜವಾದಿ ಪಕ್ಷವು ಮಂಗಳವಾರ ಪ್ರಕಟಿಸಿದೆ. ತನ್ಮೂಲಕ ಈ ರಾಜಕೀಯ ಚಾಣಾಕ್ಷನ ಅಧೃಷ್ಟ ಮತ್ತೊಮ್ಮೆ ಖುಲಾಯಿಸಿದೆ.
ಒಂದು ಕಾಲದಲ್ಲಿ ಮುಲಾಯಂ ಅವರ ಅತ್ಯಂತ ಆಪ್ತನಾಗಿದ್ದ ಸಿಂಗ್ ಅವರನ್ನು 2009ರ ಲೋಕಸಭಾ ಚುನಾವಣೆಯ ಮುನ್ನ ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆ ಬಳಿಕ ತನ್ನದೇ ಆದ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದ ಸಿಂಗ್ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಸ್ಪಿ ವಿರುದ್ಧವೇ ಹೋರಾಡಿದ್ದರು. ಆದರೆ ಈ ಕಸರತ್ತು ಯಾವುದೇ ಫಲ ನೀಡಿರಲಿಲ್ಲ. ನಂತರ ರಾಷ್ಟ್ರೀಯ ಲೋಕದಳವನ್ನು ಸೇರಿ ಲೋಕಸಭಾ ಚುನಾವಣೆಗೂ ಸ್ಪಧಿಸಿದ್ದರು. ಆದರೆ ಅಲ್ಲಿಯೂ ವಿಜಯಲಕ್ಷ್ಮಿ ಕೈಹಿಡಿದಿರಲಿಲ್ಲ.
ಶುಕ್ರವಾರ ಬೇನಿ ಪ್ರಸಾದ ವರ್ಮಾರನ್ನು ಮುಲಾಯಂ ಪಕ್ಷಕ್ಕೆ ವಾಪಸ್ ಸೇರಿಸಿಕೊಂಡಾಗ ಅಮರ ಸಿಂಗ್ ಪಕ್ಷಕ್ಕೆ ಮರಳುವ ಮತ್ತು ರಾಜ್ಯಸಭಾ ಸದಸ್ಯತ್ವವನ್ನು ಪಡೆಯುವ ಮಾತುಗಳು ಕೇಳಿ ಬರತೊಡಗಿದ್ದವು. ಬೇನಿ ಕೂಡ ಮುಲಾಯಂ ಆಪ್ತರಾಗಿದ್ದರೂ ಬಳಿಕ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು.