ಸಮಾಜವಾದಿ ಪಾರ್ಟಿ ಪಾರ್ಟಿಯೇ ಅಲ್ಲ, ಅದೊಂದು ಭಯೋತ್ಪಾದಕ ಸಂಘಟನೆ!: ಸಂಸದ ದದ್ದನ್ ಮಿಶ್ರ
ಬಲರಾಂಪುರ,ಮೇ 19: ಬಿಜೆಪಿಯ ಸಂಸದ ದದ್ದನ್ ಮಿಶ್ರ, ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಾರ್ಟಿಯನ್ನು ಭಯೋತ್ಪಾದನಾ ಸಂಘಟನೆಗಳೊಂದಿಗೆ ಹೋಲಿಸಿ ವಿವಾದದ ಕಿಡಿ ಹಚ್ಚಿದ್ದಾರೆ. ಮಂಗಳವಾರ ರಾತ್ರೆ ಪತ್ರಕರ್ತರೊಂದಿಗೆ ಮಾತಾಡಿದ ಮಿಶ್ರ, ಎಸ್ಪಿ ರಾಜಕೀಯ ಪಕ್ಷವೇ ಅಲ್ಲ. ಅದು ಕಾಶ್ಮೀರದ ಭಯೋತ್ಪಾದಕರು, ನೇಪಾಳದ ಮಾವೋವಾದಿಗಳ ರೀತಿಯಲ್ಲಿದೆ ಎಂದು ಟೀಕಿಸಿದ್ದಾರೆ. ಸಮಾಜವಾದದ ಘೋಷಣೆ ಕೂಗುತ್ತಿರುವ ಎಸ್ಪಿಯ ನಾಯಕರಿಗೂ ಸಮಾಜವಾದಕ್ಕೂ ಯಾವುದೇ ಸಂಬಂಧವಿಲ್ಲ. ರಾಜ್ಯಸಭೆ ಹಾಗೂ ವಿಧಾನಸಭೆಗೆ ಕಳುಹಿಸುವ ವಿಚಾರ ಮುಂದೆ ಬಂದಾಗ ಅದು ಸಮಾಜವಾದಿಗಳ ಬದಲು ಬಂಡವಾಳಶಾಹಿಗಳನ್ನು ಆಯ್ಕೆಮಾಡುತ್ತಿದೆ ಎಂದು ದದ್ದನ್ ಮಿಶ್ರ ಕಿಡಿಕಾರಿದ್ದಾರೆ.
ನರೇಂದ್ರ ಮೋದಿ ಸರಕಾರ ಎರಡು ವರ್ಷ ಪೂರ್ತಿಗೊಳಿಸಿರುವ ಕುರಿತು ಮಾತಾಡುತ್ತಿದ್ದ ಅವರು ಈ ಸಂದರ್ಭವನ್ನು ಸಮಾಜವಾದಿಪಕ್ಷವನ್ನು ಟೀಕಿಸಲು ಬಳಸಿದ್ದಾರೆ. ಸಮಾಜವಾದಿ ಪಕ್ಷಕ್ಕೆ ಯಾವುದೇ ಸಿದ್ಧಾಂತವೂ ಇಲ್ಲ, ನೀತಿಯೂ ಇಲ್ಲ ಎಂದ ಅವರು ಉತ್ತರ ಪ್ರದೇಶದ ಸರಕಾರ ಕೇಂದ್ರಕ್ಕೆ ಕೆಟ್ಟ ಹೆಸರು ತರಲಿಕ್ಕಾಗಿ ಅಭಿವೃದ್ಧಿಕಾರ್ಯಗಳಲ್ಲಿ ಅಡ್ಡಿ ಪಡಿಸುತ್ತಾ ನಿರ್ಲಕ್ಷ್ಯವಹಿಸುತ್ತಿದೆ ಎಂದು ಟೀಕಿಸಿದ್ದಾರೆ.