ಟೀಕಾಕಾರರ ವಿರುದ್ಧ ಹೇಮಾಮಾಲಿನಿ ಕಿಡಿ
ಮಥುರಾ ಹಿಂಸಾಚಾರ
ಆಗ್ರಾ, ಜೂ.6: ಮಥುರಾ ಹಿಂಸಾಚಾರದ ಬಳಿಕ ತನ್ನನ್ನು ಟೀಕಿಸಿದ್ದವರಿಗೆ ಸೋಮವಾರ ಮುಂಜಾನೆ ತಿರುಗೇಟು ನೀಡಿರುವ ಬಿಜೆಪಿ ಸಂಸದೆ ಹೇಮಾಮಾಲಿನಿ, ಅವರ ನೈತಿಕತೆ ಹಾಗೂ ರಾಜಕೀಯ ತೀರ್ಪನ್ನು ಪ್ರಶ್ನಿಸಿದ್ದಾರೆ.
ವಾಸ್ತವವನ್ನು ಪರಿಶೀಲಿಸದೆ ಮಾಧ್ಯಮಗಳು ಹಾಗೂ ಅವರು ತನ್ನ ಮೇಲೆ ಗುರಿಯಿರಿಸಿದ್ದಾರೆ ಮತ್ತು ತನ್ನ ಪ್ರಾಮಾಣಿಕತೆಯನ್ನು ಶಂಕಿಸಿದ್ದಾರೆ. ತನಗೆ ಮಾಹಿತಿ ಲಭಿಸಿದೊಡನೆಯೇ ತಾನು ಮಥುರೆಗೆ ಧಾವಿಸಿದ್ದೇನೆ. ಅಧಿಕಾರಿಗಳನ್ನು ಹಾಗೂ ಸಂತ್ರಸ್ತರನ್ನು ಭೇಟಿಯಾಗಿದ್ದೇನೆಂದು ಅವರು ಐಎಎನ್ಎಸ್ಗೆ ತಿಳಿಸಿದ್ದಾರೆ.
ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎರಡು ತಿಂಗಳ ಹಿಂದೆಯೇ ತಾನು ಮಥುರಾದ ಜಿಲ್ಲಾ ದಂಡಾಧಿಕಾರಿ ರಾಜೇಶ್ ಕುಮಾರ್ಗೆ ಸೂಚಿಸಿದ್ದೆ. ಆಡಳಿತದ ಹಾಗೂ ರಾಜ್ಯದ ರಾಜಕೀಯ ನಾಯಕರ ವೈಫಲ್ಯ ಈ ಹಿಂಸಾಚಾರಕ್ಕೆ ಕಾರಣವಾಯಿತೆಂದು ಹೇಮಮಾಲಿನಿ ಆರೋಪಿಸಿದ್ದಾರೆ.
ಹಿಂಸಾಚಾರದ ಬಗ್ಗೆ ವರದಿ ಕಳುಹಿಸುವ ಹಾಗೂ ದುರದೃಷ್ಟಕರ ಘಟನೆಗೆ ಕಾರಣರಾದವರನ್ನು ಬಹಿರಂಗಗೊಳಿಸುವ ಬದಲು ಅವರು ತನ್ನ ಮೇಲೆ ಗುರಿಯಿರಿಸಲು ಹಾಗೂ ಕ್ಷೇತ್ರದಲ್ಲಿ ತನ್ನ ಕೆಲಸದ ಬಗ್ಗೆ ಚರ್ಚಿಸಲಾರಂಭಿಸಿದರೆಂದು ಅವರು ಕಿರಿಕಾರಿದ್ದಾರೆ.
ಯಾವುದು ಹೆಚ್ಚು ಮುಖ್ಯ ಎಂಬುದನ್ನು ಮಾಧ್ಯಮಗಳೂ ತಿಳಿದುಕೊಳ್ಳಲಿಲ್ಲ. ಈ ಕ್ರೂರ ಘಟನೆಗಳ ಹಿಂದಿನ ಶಕ್ತಿಗಳನ್ನು ಅವು ಗುರುತಿಸಬೇಕೆಂದು ಹೇಮಾಮಾಲಿನಿ ಹೇಳಿದ್ದಾರೆ.
ತಾನು ಮಥುರಾ ಹಾಗೂ ವೃಂದಾವನಗಳಲ್ಲಿ ಅಪಾರ ಕೆಲಸ ಮಾಡಿದ್ದೇನೆ ಹಾಗೂ ಇತರರಿಗಿಂತ ಹೆಚ್ಚು ಸಮಯವನ್ನು ತನ್ನ ಕ್ಷೇತ್ರದಲ್ಲಿ ಕಳೆದಿದ್ದೇನೆಂದು ಮಥುರಾದ ಸಂಸದೆ ಪ್ರತಿಪಾದಿಸಿದ್ದಾರೆ.