ಸಮಾನ ನಾಗರೀಕ ಸಂಹಿತೆ ಕಾನೂನು ಜಾರಿಗೆ ಕೇಂದ್ರ ಸಜ್ಜು?
ಕಾನೂನು ಆಯೋಗದ ಅಭಿಪ್ರಾಯ ಕೇಳಿದ ಸರಕಾರ
ಹೊಸದಿಲ್ಲಿ, ಜು.2: ದೇಶದಲ್ಲಿ ಸಮಾನ ನಾಗರೀಕ ಸಂಹಿತೆ ಕಾನೂನು ಜಾರಿಗೆ ತರಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದ್ದು, ಈ ವಿಚಾರದ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸುವಂತೆ ಕಾನೂನು ಆಯೋಗದ ಅಭಿಪ್ರಾಯ ಕೋರಿದೆ.
ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ಕಾನೂನು ಸಚಿವ ಸದಾನಂದ ಗೌಡ ಅವರು ಈ ಮುನ್ನ ಹೇಳಿಕೆ ನೀಡಿದ್ದರು. ಆದರೆ ಈ ಸಂಬಂಧ ಸರ್ವ ಪಕ್ಷ ಸಭೆ ನಡೆಸುವುದೂ ಸೇರಿದಂತೆ ಸಂಬಂಧಪಟ್ಟ ಎಲ್ಲರ ಜೊತೆ ಚರ್ಚಿಸಿಯೇ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಇದೀಗ ಸಂಸತ್ ಅಧಿವೇಶನ ಆರಂಭಕ್ಕೆ ಮುನ್ನ ಈ ಸಂಬಂಧ ಕಾನೂನು ಆಯೋಗದ ಅಭಿಪ್ರಾಯ ಕೇಳಿರುವುದರಿಂದ ಹೆಚ್ಚಿನ ಮಹತ್ವ ಪಡೆದಿದೆ. ಇದು ಸಂಸತ್ತಿನ ಉಭಯ ಸದನದಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳೂ ಇವೆ. ಈ ಸಂಬಂಧ ಕೇಂದ್ರ ತನ್ನ ನಿಲುವನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಕೂಡಾ ಸ್ಪಷ್ಟಪಡಿಸಿದೆ.
ತಲಾಕ್ ಕಾನೂನು ಬದ್ಧತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಪೀಠ ಪ್ರಕರಣವನ್ನು ಸೆಪ್ಟೆಂಬರ್ಗೆ ಮುಂದೂಡಿದ್ದು, ವಿಷಯದ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು ಸರಕಾರದ ಕರ್ತವ್ಯ ಎಂದು ಸದಾನಂದ ಗೌಡ ಚಳಿಗಾಲದ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರು.