ಖಾನ್, ತಂಝೀಲ್ ಕುಟುಂಬಗಳಿಗೆ ತಲಾ ಕೋಟಿ ರೂ. ಪರಿಹಾರ ನೀಡಿದ ಕೇಜ್ರಿವಾಲ್
ಹೊಸದಿಲ್ಲಿ, ಜು.3: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಎನ್ಡಿಎಂಸಿ ಅಧಿಕಾರಿ ಎಂ.ಎಂ.ಖಾನ್ ಹಾಗೂ ರಾಷ್ಟ್ರೀಯ ತನಿಖಾ ದಳದ ಅಧಿಕಾರಿ ತಂಝೀಲ್ ಅಹ್ಮದ್ ಅವರ ಕುಟುಂಬಕ್ಕೆ ತಲಾ ಒಂದು ಕೋಟಿ ರೂ. ಪರಿಹಾರದ ಚೆಕ್ಕನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿತರಿಸಿದರು.
ದಿಲ್ಲಿ ಸಚಿವಾಲಯದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಮಾರಂಭದಲ್ಲಿ ಎನ್ಡಿಎಂಸಿ ಎಸ್ಟೇಟ್ ಆಫೀಸರ್ ಆಗಿದ್ದ ಖಾನ್ ಮತ್ತು ಎನ್ಐಎ ಡಿವೈಎಸ್ಪಿ ತಂಝೀಲ್ ಅಹ್ಮದ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿದರು. ಆ ಬಳಿಕ ಸಂತ್ರಸ್ತರ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಲಾಯಿತು.
ಹಲವು ಪ್ರಕರಣಗಳಲ್ಲಿ ತಂಝೀಲ್ ಅಹ್ಮದ್ ಅವರ ಸಾಹಸಗಾಥೆಗಳನ್ನು ನಾವು ಕೇಳಿದ್ದೇವೆ. ದೇಶಸೇವೆಗಾಗಿ ಅವರು ತಮ್ಮ ಜೀವವನ್ನು ಬಲಿದಾನ ಮಾಡಿದ್ದಾರೆ. ಮತ್ತೊಂದು ಕಡೆ ಎನ್ಎಂಡಿಸಿ ಅಧಿಕಾರಿ ಎಂ.ಎಂ.ಖಾನ್ ಅವರನ್ನು 3 ಕೋಟಿ ರೂ. ಲಂಚ ಸ್ವೀಕರಿಸಲು ನಿರಾಕರಿಸಿದ್ದಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಕೇಜ್ರಿವಾಲ್ ಬಣ್ಣಿಸಿದರು.
ದಿಲ್ಲಿ ಸರಕಾರದ ನೀತಿಯಂತೆ ಪರಿಹಾರದ ಚೆಕ್ಕನ್ನು ಖಾನ್ ಅವರ ಪುತ್ರಿಗೆ ವಿತರಿಸಲಾಯಿತು. ಅಹ್ಮದ್ ಅವರ ಕುಟುಂಬಕ್ಕೆ ನೀಡಬೇಕಿದ್ದ ಚೆಕ್ಕನ್ನು ಶಾಲಾ ವಿದ್ಯಾರ್ಥಿಗಳಾಗಿರುವ ಅವರ ಮಕ್ಕಳಿಗೆ ವಿತರಿಸಲಾಯಿತು.