ಆಝಾನ್ ಬಗ್ಗೆ ಅವಹೇಳನಕಾರಿ ಭಾಷಣ: ಇಂದು ವರದಿ ಸಲ್ಲಿಕೆ
ಪತ್ತನಾಪುರಂ,ಆಗಸ್ಟ್.4: ಕೇರಳಕಾಂಗ್ರೆಸ್- ಬಿ ನಾಯಕ ಆರ್.ಬಾಲಕೃಷ್ಣ ಪಿಳ್ಳೆ ನೀಡಿದ್ದಾರೆನ್ನಲಾದ ವಿವಾದಾಸ್ಪದ ಭಾಷಣದ ಕುರಿತು ತನಿಖೆ ನಡೆಸುತ್ತಿರುವ ಪುನಲೂರ ಡಿವೈಎಸ್ಪಿ ಇಂದು ರೂರಲ್ ಎಸ್ಪಿಗೆ ವರದಿ ಸಲ್ಲಿಸಲಿದ್ದಾರೆ. ಪಿಳ್ಳೆಯ ಮೂವತ್ತೇಳು ನಿಮಿಷದ ಭಾಷಣದ ಧ್ವನಿಮುದ್ರಿತ ದಾಖಲೆಯನ್ನು ಪರಿಶೀಲಿಸಿದ್ದು ಈ ಆಧಾರದಲ್ಲಿ ವರದಿ ಸಲ್ಲಿಸಲಾಗುತ್ತಿದೆ. ನಿನ್ನೆ ಡಿವೈಎಸ್ಪಿ ಶಾನವಾರ್ ನೇತೃತ್ವದ ಪೊಲೀಸರು ಧ್ವನಿಮುದ್ರಿಕೆಯನ್ನು ಸಂಗ್ರಹಿಸಿದ್ದರು ಎಂದು ವರದಿಯಾಗಿದೆ. ಪಿಳ್ಳೆಯ ಅವಹೇಳನಕಾರಿ ಭಾಷಣವನ್ನು ವಿರೋಧಿಸಿ ವಿವಿಧ ಕಡೆಗಳಿಂದ ಬಾರೀ ಪ್ರತಿಭಟನೆ ಎದುರಾಗಿದೆ.ನಿನ್ನೆ ಬಾಲಕೃಷ್ಣ ಪಿಳ್ಳೆ ಪರವಾಗಿ ಅವರ ಪುತ್ರ ಶಾಸಕ ಕೆ.ಬಿ.ಗಣೇಶ್ ಕುಮಾರ್ ಕ್ಷಮೆ ಯಾಚಿಸಿದ್ದರೂ ವಿರೋಧ ತಣ್ಣಗಾಗಿಲ್ಲ.ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಕೆಬಿಗಣೇಶ್ ಕುಮಾರ್ ಕ್ಷಮೆ ಯಾಚಿಸಿದ್ದು "ಈ ಘಟನೆಯಿಂದ ಇತರ ಧರ್ಮೀಯರಿಗೆ ನೋವಾಗಿದೆ ಎಂದು ನಾನು ಭಾವಿಸಿದ್ದೇನೆ. ಶಾಸಕ ಹಾಗೂ ಪಕ್ಷದ ಸದಸ್ಯ ಎಂಬ ನೆಲೆಯಲ್ಲಿ ತಾನು ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದರು. "ಬಾಲ್ಯದಿಂದಲೇ ಜಾತಿಧರ್ಮ ಇಲ್ಲದೆ ಬೆಳೆದು ಬಂದವನು ನಾನು. ತನ್ನ ನಿಲುವಿನಲ್ಲಿ ಈಗಲೂ ಯಾವುದೇ ಬದಲಾವಣೆಗಳಿಲ್ಲ. ಈ ಘಟನೆ ಎಲ್ಲರ ಹೃದಯದಂತೆ ನನ್ನ ಹೃದಯಕ್ಕೂ ನೋವು ನೀಡಿದೆ " ಎಂದು ಗಣೇಶ್ಕುಮಾರ್ ವಿಷಾದ ಸೂಚಿಸಿದ್ದರು.ಕಳೆದ ರವಿವಾರ ಸಮಾರಂಭವೊಂದರಲ್ಲಿ ಬಾಲಕೃಷ್ಣ ಪಿಳ್ಳೆ ವಿವಾದಾಸ್ಪದ ಭಾಷಣ ಮಾಡಿದ್ದರು. ಈ ಕುರಿತು ಎಸ್ಪಿಗೆ ದೂರು ಸಲ್ಲಿಸಲಾಗಿತ್ತು. ಆ ನಂತರ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದರು. ಪಿಳ್ಳೆಯ ಭಾಷಣದ ಪರಿಶೀಲನೆಯ ಬಳಿಕ ಮುಂದಿನ ಕ್ರಮ ಜರಗಲಿದೆ ಎಂದು ವರದಿತಿಳಿಸಿದೆ.