ಸಾಮೂಹಿಕ ಅತ್ಯಾಚಾರ ಪೀಡಿತರನ್ನು ಭೇಟಿಯಾದ ಶೀಲಾ ದೀಕ್ಷಿತ್
ಉ.ಪ್ರ. ಸರಕಾರವನ್ನು ಬರ್ಖಾಸ್ತುಗೊಳಿಸಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ
ಗಾಝಿಯಾಬಾದ್,ಆಗಸ್ಟ್ 4: ಬುಲಂದ್ಶಹರ್ನಲ್ಲಿ ಕಳೆದ ಶುಕ್ರವಾರ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ಸಂಪೂರ್ಣ ರಾಜಕೀಯ ಬಣ್ಣ ಪಡೆದುಕೊಂಡಿದೆ. ಪ್ರತಿದಿನವೂ ಪೀಡಿತ ಕುಟುಂಬವನ್ನು ರಾಜಕಾರಣಿಗಳು ಭೇಟಿ ಮಾಡುತ್ತಿದ್ದಾರೆ ಎಂದು ವರದಿಯಾಗಿದ್ದು ಇಂದು ದಿಲ್ಲಿಯ ಮಾಜಿ ಮುಖ್ಯಮಂತ್ರಿಹಾಗೂ ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾದೀಕ್ಷಿತ್ ಪೀಡಿತ ಕುಟುಂಬವನ್ನು ಭೇಟಿ ಮಾಡಿದ್ದಾರೆ. ನಂತರ ಪತ್ರಕರ್ತರೊಂದಿಗೆ ಮಾತಾಡಿದ ಅವರು "ಉತ್ತರಪ್ರದೇಶದಲ್ಲಿ ಕಾನೂನು ವ್ಯವಸ್ಥೆಯನ್ನು ಜಾರಿಗೊಳಿಸಲು ಅಖಿಲೇಶ್ ಯಾದವ್ ಸರಕಾರ ಸಂಪೂರ್ಣವಿಫಲವಾಗಿದೆ ಶೀಘ್ರ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು" ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. "ಹದಗೆಟ್ಟುಹೋದ ಕಾನೂನು ವ್ಯವಸ್ಥೆಯನ್ನು ಸರಿಪಡಿಸುವ ಬದಲು ಆಡಳಿತಪಕ್ಷದ ನಾಯಕರು ಉಲ್ಟಾ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಅಖಿಲೇಶ್ ಮತ್ತು ಸಚಿವ ಆಝಂಖಾನ್ರನ್ನು ವಜಾಗೊಳಿಸಬೇಕು. ವಿಪಕ್ಷಗಳೆಲ್ಲವೂ ಪೀಡಿತ ಕುಟುಂಬದ ಜೊತೆ ನಿಲ್ಲಬೇಕೆಂದು" ಎಂದು ಶೀಲಾದೀಕ್ಷಿತ್ ಒತ್ತಾಯಿಸಿದ್ದಾರೆ.
ಪೀಡಿತ ಕುಟುಂಬಕ್ಕೆ ಎಲ್ಲರೀತಿಯ ನೆರವಿನ ಭರವಸೆಯನ್ನು ಕಾಂಗ್ರೆಸ್ ನೀಡಿದೆ. ಅತ್ಯಾಚಾರಕ್ಕೊಳಗಾದ ಬಾಲಕಿಯು ಬಯಸುವ ಶಾಲೆಯಲ್ಲಿ ಶಿಕ್ಷಣ ಕೊಡಿಸುವುದಕ್ಕೆ ತಗಲುವ ಎಲ್ಲಖರ್ಚನ್ನು ಕಾಂಗ್ರೆಸ್ ಭರಿಸಲಿದೆ ಎಂದು ಶೀಲಾ ದೀಕ್ಷಿತ್ ಹೇಳಿದ್ದಾರೆ. ಪೀಡಿತರನ್ನು ಭೇಟಿಯಾಗಲು ಬಂದಿದ್ದ ಶೀಲಾ ದೀಕ್ಷಿತ್ ಮತ್ತು ಜತಿನ್ ಪ್ರಸಾದ್ ತಲುಪುವ ಮೊದಲು ಜನರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಪ್ರಕರಣವನ್ನು ರಾಜಕೀಯಗೊಳಿಸಿ ಮುಚ್ಚಿಹಾಕಲು ರಾಜಕಾರಣಿಗಳು ಬಯಸುತ್ತಿದ್ದಾರೆ ಆದರೆ ನಾವು ಹಾಗಾಗಲು ಬಿುಡುಸುವುದಿಲ್ಲ. ಎಲ್ಲ ಪಕ್ಷದ ರಾಜಕಾರಣಿಗಳನ್ನೂ ನಾವು ವಿರೋಧಿಸುತ್ತೇವೆ ಎಂದು ಅವರು ಹೇಳುತ್ತಿದ್ದರೆಂದು ವರದಿಯಾಗಿದೆ.