ಸುಪ್ರೀಂಕೋರ್ಟ್ ಹಿರಿಯ ನ್ಯಾಯಾಧೀಶರಿಂದಲೇ ಸಿಜೆ ನೇತೃತ್ವದ ಕೊಲಿಜಿಯಂ ವಿರುದ್ಧ ತೀವ್ರ ಟೀಕೆ
ಹೊಸದಿಲ್ಲಿ, ಸೆ.3: ಕೇಂದ್ರ ಸರ್ಕಾರ ಹಾಗೂ ನ್ಯಾಯಾಂಗ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದ ಕೊಲಿಜಿಯಂ ವ್ಯವಸ್ಥೆ ವಿರುದ್ಧ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯಮೂರ್ತಿಯೊಬ್ಬರು ತಿರುಗಿ ಬಿದ್ದಿದ್ದಾರೆ. ಇದರಿಂದ ವಿವಾದ ಮಹತ್ವದ ತಿರುವು ಪಡೆದುಕೊಂಡಿದೆ.
ಸುಪ್ರೀಂಕೋರ್ಟ್ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳಲ್ಲಿ ಐದನೇ ಸ್ಥಾನದಲ್ಲಿರುವ ಜೆ.ಚೆಲಮೇಶ್ವರ್ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿ, "ಭಾರತದ ಮುಖ್ಯ ನ್ಯಾಯಮೂರ್ತಿಯವರ ನೇತೃತ್ವದ ಕೊಲಿಜಿಯಂ ಸಮಿತಿ ಸಭೆಗೆ ಹಾಜರಾಗುವುದು ನಿಲ್ಲಿಸಿದ್ದೇನೆ" ಎಂದು ಹೇಳಿದ್ದಾರೆ. ಕೊಲಿಜಿಯಂ ವ್ಯವಸ್ಥೆಯ ವಿಧಿವಿಧಾನ ಹಾಗೂ ಪ್ರಕ್ರಿಯೆಗಳು, ಅಪಾರದರ್ಶಕವಾಗಿದ್ದು, ನೈಜ ಆಕ್ಷೇಪಗಳನ್ನು ಬಹುಮತದ ಆಧಾರದಲ್ಲಿ ತಳ್ಳಿ ಹಾಕುವ ಮೂಲಕ ಹೈಕೋರ್ಟ್ಗಳಿಗೆ ಅನಪೇಕ್ಷಿತ ಅಭ್ಯರ್ಥಿಗಳ ನೇಮಕಕ್ಕೆ ಕಾರಣವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದು ಕೇಂದ್ರ ಸರ್ಕಾರಕ್ಕಿಂತ ಬದಲಾಗಿ ನ್ಯಾಯಾಂಗ ವ್ಯವಸ್ಥೆಯೇ ನ್ಯಾಯಾಧೀಶರ ನೇಮಕಾತಿಯಲ್ಲಿ ಹೆಚ್ಚಿನ ಪ್ರಾಧಾನ್ಯ ವಹಿಸುವ ಈ ವ್ಯವಸ್ಥೆಗೆ ಸಂಬಂಧಿಸಿದಂತೆ ಅತ್ಯಂತ ಗಂಭೀರ ಹಾಗೂ ಹಾಗೂ ಸಂಕೀರ್ಣ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿಯವವರು, ಈಗಾಗಲೇ ಶಿಫಾರಸು ಮಾಡಿರುವ ನ್ಯಾಯಾಧೀಶರ ನೇಮಕಾತಿ ವಿಳಂಬದ ಬಗ್ಗೆ ನ್ಯಾಯಾಲಯ ಕಲಾಪದ ವೇಳೆಯೇ ಅಸಮಾಧಾನ ವ್ಯಕ್ತಪಡಿಸಿ, ಈ ಬಗ್ಗೆ ನ್ಯಾಯಾಂಗ ಟಿಪ್ಪಣಿ ಹೊರಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.