ವಾಟ್ಸ್ಆಪ್ನಲ್ಲಿ ಕೋಮು ಗಲಭೆಯ ವದಂತಿ ಹರಡಿದ ಇಬ್ಬರ ಬಂಧನ
ಮುಂಬೈ, ಸೆ.7: ಮುಂಬೈನ ಉಪನಗರಿ ಮಲಾಡ್ನಲ್ಲಿ ಗಣೇಶ ಚತುರ್ಥಿ ಆಚರಣೆಯ ವೇಳೆ ಕೋಮುಗಲಭೆ ನಡೆದಿದೆಯೆಂಬ ವದಂತಿಯನ್ನು ವಾಟ್ಸ್ ಆಪ್ ಮೂಲಕ ಹರಡಿ ಮತೀಯ ಸಾಮರಸ್ಯವನ್ನು ಕೆಡಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಹಿಂದಿಯಲ್ಲಿ ಬರೆಯಲಾದ ವಾಟ್ಸ್ಆಪ್ ಸಂದೇಶದಲ್ಲಿ ಮಲಾಡ್ನ ಪಠಾನ್ವಾಡಿ ಪ್ರದೇಶದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಸಂಭವಿಸಿದೆಯೆಂದು ಹೇಳಲಾಗಿತ್ತು.
ಇಂತಹ ಯಾವುದೇ ಘಟನೆ ನಡೆದಿಲ್ಲ ಹಾಗೂ ಈ ಸಂದೇಶ ಜನರನ್ನು ದಾರಿ ತಪ್ಪಿಸುವ ಉದ್ದೇಶ ಹೊಂದಿದೆಯೆಂದು ಡಿಸಿಪಿ ಅಶೋಕ್ ಧುಡೆ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಿ ಕೋಮು ದ್ವೇಷ ಮೂಡಿಸಲು ಯತ್ನಿಸಿದ ಆರೋಪದ ಮೇಲೆ ಕುರಾರ್ ಪೊಲೀಸ್ ಠಾಣೆಯಲ್ಲಿ ಐದು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಅವರಲ್ಲಿ ಇಬ್ಬರನ್ನು ಈಗ ಬಂಧಿಸಲಾಗಿದ್ದರೆ ಉಳಿದ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ.
ವದಂತಿಗಳನ್ನು ನಂಬದಂತೆ ಪೊಲೀಸರು ಮುಂಬೈ ನಿವಾಸಿಗಳಿಗೆ ಮನವಿ ಮಾಡಿದ್ದಾರೆ.
Next Story