ಗುಜರಾತ್ ಹತ್ಯಾಕಾಂಡ ಆರೋಪಿಗಳ ಪರ ವಕೀಲ ಈಗ ಭಾರತದ ಕಾನೂನು ಆಯೋಗದ ಸದಸ್ಯ
ಹೊಸದಿಲಿ, ಸೆ.29: ಗುಜರಾತ್ ಹತ್ಯಾಕಾಂಡ ಆರೋಪಿಗಳ ಪರ ವಕಾಲತ್ತು ವಹಿಸಿದ್ದ ರಾಜಕೋಟ್ ಮೂಲದ ವಕೀಲ ಅಭಯ್ ಭಾರದ್ವಾಜ್ ಅವರನ್ನು ಭಾರತ ಕಾನೂನು ಆಯೋಗದ ಅರೆಕಾಲಿಕ ಸದಸ್ಯರಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಅಡ್ವಾಣಿಯವರ ವಕೀಲರಾಗಿದ್ದ ಚಂಡೀಗಢ ಮೂಲದ ಬಿಜೆಪಿಯ ಮಾಜಿ ಸಂಸದ ಸತ್ಯಪಾಲ್ ಜೈನ್ ಅವರನ್ನು ಕಳೆದ ಜೂನ್ನಲ್ಲಿ ನೇಮಕ ಮಾಡಿದ ಬಳಿಕ ಇದು ಮತ್ತೊಂದು ವಿವಾದಾತ್ಮಕ ನಿರ್ಧಾರವಾಗಿದೆ.
ಭಾರದ್ವಾಜ್ ಅವರಂತೆ ಜೈನ್ ಅವರನ್ನು ಕೂಡಾ ಅರೆಕಾಲಿಕ ಸದಸ್ಯರಾಗಿ ನೇಮಕ ಮಾಡಿಕೊಂಡಿರುವುದು ಟೀಕೆಗೆ ಕಾರಣವಾಗಿತ್ತು. ಇದು ಬಿಜೆಪಿಯ ನಿರಾಶಾದಾಯಕ ನಡೆ ಎಂದು ಕಾಂಗ್ರೆಸ್ ಟೀಕಿಸಿದ್ದು, "ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಪ್ರಮುಖ ಹುದ್ದೆಗಳಿಗೆ ತನ್ನದೇ ಸಿದ್ಧಾಂತದ ವ್ಯಕ್ತಿಗಳನ್ನು ನೇಮಿಸಿಕೊಳ್ಳುತ್ತಿದೆ" ಎಂದು ಮಾಜಿ ಕಾನೂನು ಸಚಿವ ಕಪಿಲ್ ಸಿಬಾಲ್ ವ್ಯಂಗ್ಯವಾಡಿದ್ದಾರೆ.
21ನೆ ಕಾನೂನು ಆಯೋಗದ ಅವಧಿ ಮೂರನೇ ಒಂದರಷ್ಟು ಮುಗಿದ ಬಳಿಕ ಆಯೋಗದಲ್ಲಿ ಖಾಲಿ ಇದ್ದ ಎರಡು ಪ್ರಮುಖ ಹುದ್ದೆಗಳನ್ನು ಮೋದಿ ಸರ್ಕಾರ ಭರ್ತಿ ಮಾಡಿದೆ.