ಆರೆಸ್ಸೆಸ್ ನಿಂದ ಭಾರತ ವಿಭಜಿಸುವ ಯತ್ನ: ರಾಹುಲ್ ಗಾಂಧಿ
ಗುವಾಹಟಿ,ಸೆ.29: ಗುರುವಾರ ಇಲ್ಲಿ ಆರೆಸ್ಸೆಸ್ ಸಿದ್ಧಾಂತವನ್ನು ಟೀಕಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಅಂತಹ ಸಂಸ್ಥೆಗಳು ಭಾರತವನ್ನು ಒಡೆಯಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು. ಆರೆಸ್ಸೆಸ್ ಪದಾಧಿಕಾರಿಯೋರ್ವರು ತನ್ನ ವಿರುದ್ಧ ದಾಖಲಿಸಿರುವ ಮಾನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ ನಗರದಲ್ಲಿದ್ದ ಅವರು,ಇಂತಹ ಮೊಕದ್ದಮೆಗಳಿಂದ ತಾನು ಹಿಂಜರಿಯುವುದಿಲ್ಲ ಎಂದರು.
ದೇಶದ ಒಗ್ಗಟ್ಟು,ಈ ದೇಶದ ಜನರ ನಡುವೆ ಪರಸ್ಪರ ಪ್ರೀತಿ ಮತ್ತು ಮೆಚ್ಚುಗೆಯನ್ನು ತಾನು ಬಯಸಿದ್ದೇನೆ ಎಂದು ಅವರು ಹೇಳಿದರು. ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರು ರಾಹುಲ್ ಜೊತೆಯಲ್ಲಿದ್ದರು.
ತಾನು ರೈತರ ಪರ ಹೋರಾಟ ನಡೆಸಬಾರದು ಎಂದು ಈ ಜನರು(ಆರೆಸ್ಸೆಸ್) ಬಯಸುತ್ತಿದ್ದಾರೆ. ಆದರೆ ಅವರ ಬಯಕೆಯನ್ನು ಈಡೇರಿಸುವುದು ತನ್ನಿಂದ ಸಾಧ್ಯವಿಲ್ಲ.ಹೋರಾಟ ತನ್ನ ಡಿಎನ್ಎಯ ಒಳಗೇ ಇದೆ. ತಾನು ಹೆದರುವುದಿಲ್ಲ, ಹಿಂಜರಿಯುವುದಿಲ್ಲ....ಅವರು ಎಷ್ಟು ಮೊಕದ್ದಮೆಗಳನ್ನು ಬೇಕಾದರೂ ಹಾಕಲಿ ಎಂದರು.
ಪ್ರಸ್ತುತ ತಾನು ಕೈಗೊಂಡಿರುವ ಉತ್ತರ ಪ್ರದೇಶ ಯಾತ್ರಾಕ್ಕೆ ವ್ಯತ್ಯಯವನ್ನುಂಟು ಮಾಡಲು ಇಂತಹ ಮೊಕದ್ದಮೆಗಳನ್ನು ತನ್ನ ವಿರುದ್ಧ ದಾಖಲಿಸಲಾಗುತ್ತಿದೆ ಎಂದು ಅವರು ಹೇಳಿದರು.