ಸಲ್ಮಾನ್, ಶಾರುಖ್ ಹಾಗೂ ಆಮಿರ್ ಗೆ ಹೊಸ ವಿಳಾಸ ತೋರಿಸಿದ ಸಾಧ್ವಿ ಪ್ರಾಚಿ
ಜಬಲ್ಪುರ್, ಅ.3: ಬಾಲಿವುಡ್ ನಲ್ಲಿ ಕೆಲಸ ಮಾಡುವ ಪಾಕಿಸ್ತಾನಿ ಕಲಾವಿದರ ಮೇಲೆ ವಾಗ್ದಾಳಿ ನಡೆಸಿದ ವಿವಾದಿತ ವಿಹಿಂಪ ನಾಯಕಿ ಸಾಧ್ವಿ ಪ್ರಾಚಿ ಈ ಕಲಾವಿದರು ತಮ್ಮ ಪ್ರತಿಭೆಯನ್ನು ತಮ್ಮ ದೇಶದಲ್ಲೇ ಪ್ರದರ್ಶಿಸಬೇಕು ಎಂದರಲ್ಲದೆ, ಈ ಪಾಕಿಸ್ತಾನಿ ಕಲಾವಿದರಿಗೆ ಕನಿಕರ ತೋರಿಸುವ ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಹಾಗೂ ಆಮಿರ್ ಖಾನ್ ಕೂಡ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದರು.
ಪಾಕಿಸ್ತಾನದ ಕಲಾವಿದರು ತಮ್ಮ ದೇಶಕ್ಕೆ ಹಿಂದಿರುಗಬೇಕು ಎಂಬ ಇತ್ತೀಚಿಗೆ ಕೆಲವರು ಮುಂದಿರಿಸಿದ ಬೇಡಿಕೆಯ ಬಗ್ಗೆ ಪ್ರತಿಕ್ರಿಯಿಸಿದ್ದನಟ ಸಲ್ಮಾನ್ ಖಾನ್, ಅವರೆಲ್ಲ ಕಲಾವಿದರಾಗಿದ್ದು ‘‘ಭಯೋತ್ಪಾದಕರಲ್ಲ’’ ಎಂದು ಹೇಳಿದ್ದರು.
ನೆರೆಯ ರಾಷ್ಟ್ರದವರೊಂದಿಗೆ ಪ್ರೀತಿಯಿಂದಿರಬೇಕಾಗಿರುವುದು ನಿಜವಾದರೂ,ನೆರೆಯ ರಾಷ್ಟ್ರ ‘ಬದ್ಮಾಶ್’ ಆಗಿದ್ದರೆ ಅದಕ್ಕೆ ಪಾಠ ಕಲಿಸುವುದು ಅಗತ್ಯವಾಗಿರುತ್ತದೆ ಎಂದು ಸಾಧ್ವಿ ಹೇಳಿದ್ದಾರೆ.
ದೇಶದ ವಿಭಜನೆಗೆ ಹಾಗೂ ಕಾಶ್ಮೀರ ಸಮಸ್ಯೆಗೆ ಮಹಾತ್ಮ ಗಾಂಧಿ ಕಾರಣ ಎಂದು ಹೇಳಿದ ಆಕೆ, ಮಹಾತ್ಮ ಗಾಂಧಿ ತಮಗೆ ಯಾವತ್ತೂ ಆದರ್ಶವಾಗಿರಲು ಸಾಧ್ಯವಿಲ್ಲ ಹಾಗೂ ತಾವು ಅವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಗೆ ಸೆಲ್ಯೂಟ್ ಮಾಡುವುದಾಗಿಯೂ ಹೇಳಿಕೊಂಡರು.
ಲಾಲ್ ಬಹಾದ್ದೂರ್ ಶಾಸ್ತ್ರಿ ನಂತರ ದೇಶದ ಯೋಧರ ಬಲಿಾನಕ್ಕೆ ಪ್ರತೀಕಾರ ತೀರಿಸಿದ ಎರಡನೆ ಪ್ರಧಾನಿನರೇಂದ್ರ ಮೋದಿಯಾಗಿದ್ದಾರೆ, ಎಂದು ಸಾಧ್ವಿ ಪ್ರಧಾನಿಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಪಾಕಿಸ್ತಾನವನ್ನು ಬೆಂಬಲಿಸುವ ಹಾಗೂ ಅಲ್ಲಿರುವ ಭಯೋತ್ಪಾದಕ ಮಸೂದ್ ಅಝರ್ ಉಗ್ರನಲ್ಲವೆಂದು ಹೇಳುವ ಚೀನಾದ ಯಾವುದೇ ಉತ್ಪನ್ನವನ್ನು ಭಾರತ ಮಾರಾಟ ಮಾಡಕೂಡದು ಎಂದು ಸಾಧ್ವಿ ತಾಕೀತು ಮಾಡಿದ್ದಾರೆ.