ಸರ್ಜಿಕಲ್ ದಾಳಿಯ ವೀಡಿಯೊವನ್ನು ಬಹಿರಂಗಗೊಳಿಸುವ ಅಗತ್ಯವಿಲ್ಲ:ಪಾರಿಕ್ಕರ್
ಆಗ್ರಾ,ಅ.6: ಸೇನೆಯ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅದು ನಡೆಸಿದ ಸರ್ಜಿಕಲ್ ದಾಳಿಗೆ ಸಾಕ್ಷವನ್ನು ಕೇಳಿರುವವರ ನಿಷ್ಠೆಯನ್ನು ಇಂದಿಲ್ಲಿ ಪ್ರಶ್ನಿಸಿದ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್ ಅವರು, ಕಾರ್ಯಾಚರಣೆಯ ಯಾವು ದೇ ವೀಡಿಯೊವನ್ನು ಬಹಿರಂಗಗೊಳಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ನಿಯಂತ್ರಣ ರೇಖೆಯಾಚೆ ಭಯೋತ್ಪಾದಕರ ಶಿಬಿರಗಳ ವಿರುದ್ಧ ಸೇನೆಯ ಕಾರ್ಯಾಚರಣೆಯನ್ನು ‘ಶೇ.100ರಷ್ಟು ಪರಿಪೂರ್ಣ ಸರ್ಜಿಕಲ್ ದಾಳಿ’ ಎಂದು ಬಣ್ಣಿಸಿದ ಅವರು, ನರೇಂದ್ರ ಮೋದಿ ಸರಕಾರದಡಿ ದೇಶದ ಗಡಿಗಳು ಸುಭದ್ರವಾಗಿವೆ ಎಂದರು.
ಆದರೂ ದೇಶಕ್ಕೆ ತಮ್ಮ ಸಂಪೂರ್ಣ ನಿಷ್ಠೆಯನ್ನು ಪ್ರದರ್ಶಿಸದ ‘ಕೆಲವು ಶಕ್ತಿಗಳ’ ವಿರುದ್ಧ ಜಾಗೃತವಾಗಿರಬೇಕಿದೆ ಎಂದು ಅವರು ಎಚ್ಚರಿಕೆ ನೀಡಿದರು.
ನಮ್ಮ ಪಡೆಗಳ ಶೌರ್ಯವನ್ನು ಈವರೆಗೆ ಯಾರೂ ಶಂಕಿಸಿರಲಿಲ್ಲ, ಆದರೆ ಇದೇ ಮೊದಲ ಬಾರಿಗೆ ಇತ್ತೀಚಿಗೆ ಕೆಲವು ಜನರು ಆ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ ಎಂದ ಪಾರಿಕ್ಕರ್,ಅಂತಹವರ ಹೆಸರುಗಳನ್ನು ಹೇಳಲು ತಾನು ಬಯಸುವುದಿಲ್ಲ ಎಂದರು.
ಸರ್ಜಿಕಲ್ ದಾಳಿಗಳು ನಡೆದಿರುವುದನ್ನು ಪಾಕಿಸ್ತಾನಿ ಪೊಲೀಸ್ ಅಧಿಕಾರಿ ಯೋರ್ವರು ಒಪ್ಪಿಕೊಂಡಿರುವ ಆಂಗ್ಲ ಸುದ್ದಿವಾಹಿನಿಯ ವರದಿಯನ್ನು ಬೆಟ್ಟು ಮಾಡಿದ ಅವರು, ಈ ಹಿನ್ನೆಲೆಯಲ್ಲಿ ವೀಡಿಯೊ ಬಿಡುಗಡೆ ಮಾಡಲು ಅಥವಾ ಯಾವುದೇ ಸಾಕ್ಷ ಒದಗಿಸಲು ಈಗ ಕಾರಣವೇ ಇಲ್ಲ ಎಂದರು.
ಇಲ್ಲಿ ಬಿಜೆಪಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಅಗತ್ಯವಾದರೆ ಗಡಿಯಲ್ಲಿ ಹೋರಾಡಲು ತಾವು ಸಿದ್ಧರಿದ್ದೇವೆಂದು ಹಲವಾರು ಮಾಜಿ ಯೋಧರು ತನಗೆ ಪತ್ರಗಳನ್ನು ಬರೆದಿದ್ದಾರೆ. ಅವರನ್ನು ತಾನು ವಂದಿಸುತ್ತೇನೆ ಎಂದರು.