ಅರ್ನಬ್ ಗೋಸ್ವಾಮಿ ಮೇಲೆ ಟೈಮ್ಸ್ ಮಾಲಕ ' ಸರ್ಜಿಕಲ್ ದಾಳಿ ' !
ಹೊಸದಿಲ್ಲಿ, ಅ.7: ಟೈಮ್ಸ್ ನೌ ಪ್ರಧಾನ ಸಂಪಾದಕ ಹಾಗೂ ’ನ್ಯೂಸ್ ಅವರ್’ ನಿರೂಪಕ ಅರ್ನಬ್ ಗೋಸ್ವಾಮಿ ಮೇಲೆ ಟೈಮ್ಸ್ ಮಾಲಕರು ’ಸರ್ಜಿಕಲ್ ದಾಳಿ’ ನಡೆಸಿರುವುದು ಬೆಳಕಿಗೆ ಬಂದಿದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಬಿಜೆಪಿಯೇತರ ಪಕ್ಷ ಹಾಗೂ ಆರೆಸ್ಸೆಸ್ ಸಿದ್ಧಾಂತದಲ್ಲಿ ನಂಬಿಕೆಯಿಲ್ಲದವರಿಗೆ ವಿಪ್ಪಿಂಗ್ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪತ್ರಿಕೋದ್ಯಮದ ಸ್ವಯಂಘೋಷಿತ ಪವಾಡ ಪುರುಷ ಗೋಸ್ವಾಮಿ ಇದೀಗ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.
ಪಾಕಿಸ್ತಾನಕ್ಕೆ ಸಂಬಂಧಿಸಿದ ಯಾವುದೇ ಸುದ್ದಿಗಳ ಬಗ್ಗೆ ತಿರಸ್ಕಾರ ಹೊಂದಿರುವ ಗೋಸ್ವಾಮಿ, ಉರಿ ಘಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಬಲ್ಯ ಮೆರೆಯುತ್ತಾ ಬಂದವರು. ಉರಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಸರ್ಜಿಕಲ್ ದಾಳಿ ಕೈಗೊಂಡ ಸುದ್ದಿ ತಿಳಿದಾಗಲಂತೂ ಅವರ ರೋಮಾಂಚನವನ್ನು ತಡೆದುಕೊಳ್ಳಲು ಸಾಧ್ಯವೇ ಆಗಲಿಲ್ಲ. ಬಾಲಿವುಡ್ ಚಿತ್ರಗಳಿಂದ ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸುವ ಅಭಿಯಾನವನ್ನೂ ಕೈಗೊಂಡರು. ಈ ಮನೋಭಾವ ಸ್ಟುಡಿಯೊದೊಳಗೆಯೇ ಅವರ ಬಗ್ಗೆ ಅಸಮಾಧಾನ ಹೆಡೆ ಎತ್ತಲು ಕಾರಣವಾಗಿತ್ತು.
ಆದರೆ ಬುಧವಾರ ಟೈಮ್ಸ್ ನೌ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್, ಟ್ಟಿಟ್ಟರ್ನಲ್ಲಿ ಗೋಸ್ವಾಮಿ ಅಭಿಪ್ರಾಯಕ್ಕೆ ವಿರುದ್ಧವಾದ ಕಟು ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ ಅರ್ನಬ್ ಮುಖ ಅವಮಾನದಿಂದ ಕೆಂಪೇರಿತ್ತು. ಪಾಕಿಸ್ತಾನಿ ಕಲಾವಿದರನ್ನು ಭಾರತ ಬೆಂಬಲಿಸಬೇಕಿತ್ತು ಎಂದು ವಿನೀತ್ ಟ್ವೀಟ್ ಮಾಡಿದ್ದರು. ಪಾಕ್ ಕಲಾವಿದರನ್ನು ಬೆಂಬಲಿಸುವ ಮೂಲಕ ನಾವು ಜಾಗತಿಕವಾಗಿ ಪ್ರಬಲವಾಗಲು ಅವಕಾಶವಿತ್ತು. ಸ್ವಾತಂತ್ರ್ಯ ಹಾಗೂ ಶಾಂತಿಯುತ ದೇಶ ಎಂಬ ಹೆಗ್ಗಳಿಕೆ ಸಿಗುತ್ತಿತ್ತು. ನಾವು ಪಾಕಿಸ್ತಾನವನ್ನು ಅವರ ಜನರಲ್ಲೇ ಪ್ರತ್ಯೇಕಿಸಲು ಪ್ರಯತ್ನಿಸಿದೆವು" ಎಂದು ಟ್ವೀಟ್ ಮಾಡಿದ್ದಾರೆ.