ಹುತಾತ್ಮ ಯೋಧರು, ಪಾಕ್ ನಟರಿಕೆ ನಿಷೇಧ ಕುರಿತು ಅಕ್ಷಯ್ ಕುಮಾರ್ ಏನು ಹೇಳಿದ್ದಾರೆ ನೋಡಿ
ಮುಂಬೈ, ಅ.7: ದೇಶದ ಸೈನಿಕರು ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದರೂ, ಪಾಕಿಸ್ತಾನಿ ಕಲಾವಿದರನ್ನು ನಿಷೇಧಿಸಿರುವ ಬಗ್ಗೆ ಕೆಲವರು ಚರ್ಚೆ ನಡೆಸುತ್ತಿರುವುದು ಆಘಾತಕಾರಿ ಎಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.
ರುಸ್ತುಂ ನಾಯಕ 49 ವರ್ಷದ ಅಕ್ಷಯ್ ಅವರ ತಂದೆ ಸೇನಾ ಅಧಿಕಾರಿಯಾಗಿದ್ದವರು. ಭಾರತೀಯ ಸೇನೆ ಪಾಕಿಸ್ತಾನದಲ್ಲಿ ಉಗ್ರರ ಅಡಗುದಾಣಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿರುವವರನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಅಕ್ಷಯ್ ಕುಮಾರ್ ವೀಡಿಯೊ ಬಿಡುಗಡೆ ಮಾಡಿದ್ದಾರೆ.
"ಈ ವಿಷಯ ಕೆಲವು ದಿನಗಳಿಂದ ನನ್ನ ತಲೆಯಲ್ಲಿ ಕೊರೆಯುತ್ತಿತ್ತು. ನಾನಿದನ್ನು ಹೇಳಲೇಬೇಕಿತ್ತು. ಯಾರನ್ನೂ ತೆಗಳುವುದು ಇದರ ಉದ್ದೇಶವಲ್ಲ..." ಎಂದು ಸಾಮಾಜಿಕ ಜಾಲತಾಣಗಳಲ್ಲೂ ಅಕ್ಷಯ್ ಹೇಳಿದ್ದಾರೆ.
"ನಾನು ಸೆಲೆಬ್ರಿಟಿಯಾಗಿ ಮಾತನಾಡುತ್ತಿಲ್ಲ. ಒಬ್ಬ ನಿವೃತ್ತ ಸೇನಾ ಅಧಿಕಾರಿಯ ಮಗನಾಗಿ ನಿಮ್ಮ ಜತೆ ಮಾತನಾಡುತ್ತಿದ್ದೇನೆ. ಕೆಲವರು ವಾದಿಸುವುದನ್ನು, ಸರ್ಜಿಕಲ್ ದಾಳಿಗೆ ಪುರಾವೆ ಕೇಳುವುದನ್ನು ನೋಡುತ್ತಿದ್ದೇನೆ. ಕೆಲವರು ಕಲಾವಿದರ ನಿಷೇಧಕ್ಕೆ ಆಗ್ರಹಿಸುತ್ತಿದ್ದಾರೆ. ಕೆಲವರಿಗೆ ಯುದ್ಧದ ಭೀತಿ ಆವರಿಸಿದೆ" ಎಂದು ವೀಡಿಯೊದಲ್ಲಿ ಹೇಳಿದ್ದಾರೆ.