ಕಾನೂನು ಸಮಸ್ಯೆ ಬಗೆಹರಿಸಿದರೆ, ಸೌಮ್ಯಾ ಕೊಲೆಪ್ರಕರಣದಲ್ಲಿ ಕೋರ್ಟಿಗೆ ಹಾಜರಾಗುವೆ: ನ್ಯಾ.ಕಾಟ್ಜು
ಹೊಸದಿಲ್ಲಿ, ಅಕ್ಟೋಬರ್ 19: ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶ ಎಂಬ ನೆಲೆಯಲ್ಲಿ ಕೋರ್ಟಿನಲ್ಲಿ ಹಾಜರಾಗಲು ತನಗೆ ಸಂವಿಧಾನಾತ್ಮಕ ನಿಷೇಧವಿದೆ, ಆದರೆ ಇದನ್ನು ತೆರವುಗೊಳಿಸಿಕೊಟ್ಟರೆ ತಾನು ಸೌಮ್ಯಾ ಹತ್ಯೆಪ್ರಕರಣದಲ್ಲಿ ಸುಪ್ರೀಂಕೋರ್ಟಿನಲ್ಲಿ ಹಾಜರಾಗಿ ಸೌಮ್ಯಾ ಹತ್ಯಾಪ್ರಕರಣದ ಕುರಿತು ತನ್ನ ನಿಲುವನ್ನು ತಿಳಿಸುವೆ ಎಂದು ನಿವೃತ್ತ ಜಸ್ಟಿಸ್ ಮಾರ್ಕಂಡೇಯ ಕಾಟ್ಜು ಹೇಳಿದ್ದಾರೆಂದು ವರದಿಯಾಗಿದೆ. ತನ್ನ ಅಧಿಕೃತ ಫೇಸ್ಬುಕ್ ಪೇಜ್ನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಆರೋಪಿ ಗೋವಿಂದಚಾಮಿಯ ಗಲ್ಲು ಶಿಕ್ಷೆ ರದ್ದುಪಡಿಸಿರುವುದರ ಕುರಿತು ಮರು ಪರಿಶೀಲನಾ ಅರ್ಜಿ ಪರಿಗಣಿಸುವ ವೇಳೆ ಸುಪ್ರೀಂಕೋರ್ಟು ಇದೇ ವಿಷಯದಲ್ಲಿ ಕೋರ್ಟನ್ನು ಟೀಕಿಸಿದ ಮಾರ್ಕಂಡೇಯ ಕಾಟ್ಜುರನ್ನು ಕೋರ್ಟಿಗೆ ಬಂದು ಅಭಿಪ್ರಾಯಮಂಡಿಸುವಂತೆ ಸುಪ್ರೀಂಕೋರ್ಟು ಆಗ್ರಹಿಸಿತ್ತು. ಆದರೆ ಸಂವಿಧಾನದ 124(7) ಪ್ರಕಾರ ನಿವೃತ್ತ ಜಡ್ಜ್ ಕೋರ್ಟಿಗೆ ಹಾಜರಾಗುವುದಕ್ಕೆ ನಿಷೇಧವಿದೆ. ತನಗಾಗಿ ಈ ನಿಯಮವನ್ನು ತೆರವು ಗೊಳಿಸಲು ಜಡ್ಜ್ಗಳು ಸಿದ್ಧರಿದ್ದಾರೆಂದಾದರೆ ಕೋರ್ಟಿನಲ್ಲಿ ಖಂಡಿತಾ ಹಾಜರಾಗುವೆ ಎಂದು ಕಟ್ಜು ಹೇಳಿದ್ದಾರೆ. ಕೋರ್ಟಿನಲ್ಲಿ ಹಾಜರಾಗುವ ಕುರಿತು ತನಗೆ ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಆದರೆ ಕೇರಳದ ವಕೀಲರು ಈ ಕುರಿತು ತನ್ನಲ್ಲಿ ವಿಚಾರಿಸಿದ್ದಾರೆಂದು ಫೇಸ್ ಬುಕ್ ಪೋಸ್ಟ್ನಲ್ಲಿ ಕಾಟ್ಜು ಬರೆದಿದ್ದಾರೆ. "ಸುಪ್ರೀಂಕೋರ್ಟಿನ ನೋಟಿಸ್ಗೆ ನೀಡಬೇಕಾದ ಉತ್ತರವನ್ನು ನಾನು ತಯಾರಿಸುತ್ತಿದ್ದೇನೆ. ತಡವಾಗದೆ ಅದನ್ನು ನಾನು ಫೇಸ್ಬುಕ್ನಲ್ಲಿ ಪ್ರಕಟಿಸುವೆ" ಎಂದು ಕಾಟ್ಜು ಹೇಳಿದ್ದಾರೆಂದು ವರದಿ ತಿಳಿಸಿದೆ.