ಹುತಾತ್ಮ ಯೋಧರನ್ನು ಗೌರವಿಸಲು 12,000 ಕಿ.ಮೀ. ಸೈಕಲ್ ತುಳಿಯಲಿರುವ ನಿವೃತ್ತ ಜನರಲ್!
ಮೀರತ್,ಅ.21: ಸರ್ಜಿಕಲ್ ದಾಳಿಯ ಕುರಿತ ವಿವಾದಗಳು ಇನ್ನೂ ಹಸಿರಾ ಗಿರುವಾಗಲೇ ಭಾರತೀಯ ಸೇನೆಯ ಮೇಜರ್ ಜನರಲ್ ಸೋಮನಾಥ್ ಝಾ(58) ಅವರು ಸ್ವಾತಂತ್ರಾನಂತರ ಹುತಾತ್ಮರಾಗಿರುವ ಯೋಧರನ್ನು ವಿಶಿಷ್ಟ ರೀತಿಯಲ್ಲಿ ಗೌರವಿಸಲು ನಿರ್ಧರಿಸಿದ್ದಾರೆ. 2016,ಸೆ.30ರಂದು ಸೇನೆಯಿಂದ ನಿವೃತ್ತರಾಗಿರುವ ಅವರು ಇದಕ್ಕಾಗಿ ದೇಶಾದ್ಯಂತ ಸುಮಾರು 12,000 ಕಿ.ಮೀ.ಗಳಷ್ಟು ದೂರ ಸೈಕಲ್ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ. ನಿವೃತ್ತಿಗೆ ಹೆಚ್ಚಿನ ಅರ್ಥವನ್ನು ಅವರು ಕಲ್ಪಿಸಿಲ್ಲ.
ಇತ್ತೀಚಿನ ಉರಿ ಭಯೋತ್ಪಾದಕ ದಾಳಿಯಲ್ಲಿ ಯೋಧರು ಸಾವನ್ನಪ್ಪಿದ ಕುರಿತು ಮಾತನಾಡಿದ ಅವರು, ಕೇವಲ ಈ 19 ವೀರಯೋಧರಿಗಾಗಿ ಅಲ್ಲ. ಸ್ವತಂತ್ರ ಭಾರತದಲ್ಲಿ ದೇಶಕ್ಕಾಗಿ ಹುತಾತ್ಮರಾಗಿರುವ ಸುಮಾರು 21,000 ಯೋಧರಿಗಾಗಿ ತಾನೀ ಯಾತ್ರೆಯನ್ನು ಕೈಗೊಂಡಿದ್ದೆನೆ ಎಂದು ತಿಳಿಸಿದರು.
ಮುಂದಿನ ಏಳು ತಿಂಗಳಲ್ಲಿ ದೇಶದ ಎಲ್ಲ ರಾಜ್ಯಗಳಿಗೂ ಭೇೀಟಿ ನೀಡಲಿರುವ ಝಾ 12,000 ಕಿ.ಮೀ.ಗಳಷ್ಟು ದೂರ ಪೆಡಲ್ಗಳನ್ನು ತುಳಿಯಲಿದ್ದಾರೆ. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನೂ ಅವರು ಮಾಡಿಕೊಂಡಿದ್ದಾರೆ.
ಬುಧವಾರ ಅಂಬಾಲಾದಿಂದ ತನ್ನ ಯಾತ್ರೆಯನ್ನು ಆರಂಭಿಸಿರುವ ಝಾ ಗುರುವಾರ ಮಧ್ಯಾಹ್ನ ಇಲ್ಲಿಗೆ ಆಗಮಿಸಿದ್ದಾರೆ. ಅಂದ ಹಾಗೆ ಅವರ ಈ ಯಾತ್ರೆಯಲ್ಲಿ ಬಾಳಸಂಗಾತಿ ಚಿತ್ರಾ ಕೂಡ ಸಾಥ್ ನೀಡುತ್ತಿದ್ದಾರೆ.