ಜಯಲಲಿತಾ ಚೇತರಿಕೆ ಖುಷಿ ತಂದಿದೆ : ರಾಜ್ಯಪಾಲ ವಿ.ಎಸ್.ರಾವ್
ಚೆನ್ನೈ, ಅ.22: ಮುಖ್ಯಮಂತ್ರಿ ಜಯಲಲಿತಾ ಚಿಕಿತ್ಸೆ ಪಡೆಯುತ್ತಿರುವ ಅಪೊಲೋ ಆಸ್ಪತ್ರೆಗೆ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ಇಂದು ತೆರಳಿ ಮುಖ್ಯಮಂತ್ರಿಯನ್ನು ಭೇಟಿಯಾದರು. ಅವರು ಚೇತರಿಸಿಕೊಳ್ಳುತ್ತಿರುವುದು ಸಂತಸದ ವಿಷಯ ಎಂದು ರಾಜ್ಯಪಾಲರು ಬಳಿಕ ಪ್ರತಿಕ್ರಿಯೆ ನೀಡಿದರು. ಅಪೋಲೋ ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರತಾಪ್ ಸಿ.ರೆಡ್ಡಿ ಅವರು ಜಯಲಲಿತಾರಿಗೆ ತಜ್ಞ ವೈದ್ಯರಿಂದ ನೀಡಲಾಗುತ್ತಿರುವ ಚಿಕಿತ್ಸೆಯ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದರು. ಜಯಲಲಿತಾ ಮಾತಾಡಲು ಶಕ್ತರಾಗಿದ್ದು ಚಿಕಿತ್ಸೆಗೆ ಅದ್ಭುತವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅವರು ತಿಳಿಸಿದರು. ಲೋಕಸಭೆಯ ಉಪ ಸ್ಪೀಕರ್ ಎಂ. ತಂಬಿದುರೈ, ರಾಜ್ಯದ ವಿತ್ತಸಚಿವ ಒ.ಪನ್ನೀರ್ಸೆಲ್ವಂ, ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರಾಮಮೋಹನ ರಾವ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯಪಾಲರನ್ನು ಸ್ವಾಗತಿಸಿದರು. ತೀವ್ರ ಜ್ವರ ಮತ್ತು ನಿರ್ಜಲೀಕರಣ ಸಮಸ್ಯೆಯಿಂದಾಗಿ ಜಯಲಲಿತಾ ಸೆ.22ರಂದು ಆಸ್ಪತ್ರೆಗೆ ದಾಖಲಾಗಿದ್ದರು.
Next Story