ಅಮರ್ ಸಿಂಗ್,ಶಿವಪಾಲ್ ಯಾದವಗೆ ಮುಲಾಯಂ ಸಮರ್ಥನೆ
ಕೋಲಾಹಲದಲ್ಲಿಯೇ ಕೊನೆಗೊಂಡ ಎಸ್ಪಿ ಸಭೆ
ಲಕ್ನೋ,ಅ.24: ಇಂದಿಲ್ಲಿ ನಡೆದ ಸಮಾಜವಾದಿ ಪಕ್ಷದ ಸಭೆ ಭಾರೀ ಕೋಲಾಹಲ ಗಳಿಗೆ ಸಾಕ್ಷಿಯಾಯಿತಲ್ಲದೆ, ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ ಮತ್ತು ಅವರ ಪುತ್ರ,ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ ಯಾದವ ಅವರ ನಡುಬಿರುಮಾತುಗಳ ವಾಗ್ಯುದ್ಧ ನಡೆಯಿತು. ಈ ವೇಳೆ ಅಮರ ಸಿಂಗ್ರನ್ನು ತನ್ನ ‘ಸೋದರ’ ಮತ್ತು ಶಿವಪಾಲ ಯಾದವರನ್ನು ‘ಜನನಾಯಕ ’ ಎಂದು ಬಣ್ಣಿಸುವ ಮೂಲಕ ಮುಲಾಯಂ ಅವರಿಬ್ಬರಿಗೂ ತನ್ನ ಸ್ಪಷ್ಟಬೆಂಬಲವನ್ನು ವ್ಯಕ್ತಪಡಿಸಿದರು. ಆದರೆ,ಅಖಲೇಶ ಪಕ್ಷದಲ್ಲಿ ಮುಂದುವರಿಯುತ್ತಾರೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಪಕ್ಷವು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ ಮತ್ತು ಪಕ್ಷದ ಸದಸ್ಯರು ಪರಸ್ಪರ ಕಚ್ಚಾಡಬಾರದು ಎಂದು ಮುಲಾಯಂ ಹೇಳಿದರಾದರೂ ಅದು ಗಲಾಟೆಯಲ್ಲಿ ಮುಳುಗಿದ್ದ ಸಭೆಯ ಮೇಲೆ ಯಾವುದೇ ಪರಿಣಾಮವನ್ನು ಬೀರಲಿಲ್ಲ. ವೇದಿಕೆಯಲ್ಲಿಯೇ ತೀವ್ರ ಮಾತಿನ ಚಕಮಕಿಗಳು ನಡೆದು ಸಭೆಯು ತರಾತುರಿಯಲ್ಲಿ ಅಂತ್ಯಗೊಂಡಿತು.
ಸಭೆಯಲ್ಲಿ ಮುಲಾಯಂ ಮತ್ತು ಅಖಿಲೇಶ ಪರಸ್ಪರರತ್ತ ಕೂಗಾಡುತ್ತಿದ್ದುದು ಆಡಳಿತ ಪಕ್ಷದಲ್ಲಿನ ಬಿಕ್ಕಟ್ಟು ತೀವ್ರ ಉಲ್ಬಣಗೊಂಡಿದೆ ಎನ್ನುವುದನ್ನು ಸೂಚಿಸುತ್ತಿತ್ತು.
ಅಮರ್ ಮತ್ತು ಶಿವಪಾಲ್ ವಿರುದ್ಧ ಯಾವುದೇ ಮಾತುಗಳನ್ನು ತಾನು ಸಹಿಸುವುದಿಲ್ಲ. ಅಮರ್ ತಾನು ಜೈಲಿಗೆ ಹೋಗುವುದನ್ನು ತಪ್ಪಿಸಿದ್ದರು ಎಂದು ಪಕ್ಷದ ಶಾಸಕರು,ಸಂಸದರು ಮತ್ತು ಸಚಿವರು ಪಾಲ್ಗೊಂಡಿದ್ದ ಸಭೆಯಲ್ಲಿ ಮುಲಾಯಂ ಹೇಳಿದರು.
ಕೆಂಪು ಟೊಪ್ಪಿಗೆ(ಎಸ್ಪಿ ಟೊಪ್ಪಿಗೆಯ ಬಣ್ಣ) ಧರಿಸಿದ ಮಾತ್ರಕ್ಕೆ ಎಲ್ಲರೂ ಸಮಾಜ ವಾದಿಗಳಾಗುವುದಿಲ್ಲ ಎಂದರು.
ಅಮರ ಸಿಂಗ್ರನ್ನು ನಿಂದಿಸುತ್ತಿರುವುದಕ್ಕಾಗಿ ಅಖಿಲೇಶಗೆ ಎಚ್ಚರಿಕೆ ನೀಡಿದ ಅವರು,ಅಮರ್ ಇಲ್ಲದಿದ್ದರೆ ತಾನಿಂದು ಜೈಲಿನಲ್ಲಿರುತ್ತಿದ್ದೆ. ಅವರು ತನ್ನ ಸೋದರನಿದ್ದಂತೆ ಎಂದು ಹೇಳಿದರು.
ಶಿವಪಾಲ್ ಯಾದವ ಅವರನ್ನು ಜನನಾಯಕ ಎಂದು ಬಣ್ಣಿಸಿದ ಮುಲಾಯಂ,ಅವರು ಪಕ್ಷಕ್ಕೆ ನೀಡಿರುವ ಕೊಡುಗೆಯನ್ನು ತಾನು ಮರೆಯಲು ಸಾಧ್ಯವಿಲ್ಲ ಎಂದರು.