ವಡಂಕಚೇರಿ ರಾಜಕಾರಣಿಗಳಿಂದ ಸಾಮೂಹಿಕ ಅತ್ಯಾಚಾರ ಪ್ರಕರಣ: ಪೊಲೀಸರಿಂದ ಪ್ರಮಾದ ಸಂಭವಿಸಿತೇ?
ತಿರುವನಂತಪುರಂ, ನ. 4: ವಡಂಕಚೇರಿ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಪೊಲೀಸರಿಂದ ನಿಲರ್ಕ್ಷ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಪ್ರಕರಣದ ಕುರಿತು ಚರ್ಚಿಸಲು ರೇಂಜ್ ಐಜಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂತಹ ಒಂದು ಅಭಿಪ್ರಾಯ ವ್ಯಕ್ತವಾಗಿದೆಎಂದು ವೆಬ್ಪೋರ್ಟಲೊಂದು ವರದಿ ಮಾಡಿದೆ. ಉನ್ನತ ರಾಜಕೀಯ ವ್ಯಕ್ತಿಗಳುಶಾಮೀಲಾಗಿರುವ ಪ್ರಕರಣ ಇದಾಗಿದ್ದು, ಪೊಲೀಸರು ಎಚ್ಚರದಿಂದ ಹೆಜ್ಜೆ ಇಡಬೇಕಿತ್ತು. ಪ್ರಕರಣದ ಎಲ್ಲ ಪಾರ್ಶ್ವಗಳನ್ನು ಅಧ್ಯಯನ ನಡೆಸಿ ತನಿಖೆ ಆಗಿಲ್ಲ ಎಂದು ಸಭೆಯಲ್ಲಿ ವಿಮರ್ಶೆ ಕೇಳಿಬಂದಿದೆ.
ಆದ್ದರಿಂದ ತನಿಖಾಧಿಕಾರಿಯಾಗಿದ್ದ ಪೇರಮಂಗಲಂ ಸಿಐಯವರನ್ನು ಬದಲಾಯಿಸಿ ಗುರುವಾಯೂರು ಎಸಿಪಿಗೆ ತನಿಖೆಯ ಹೊಣೆಯನ್ನು ವಹಿಸಿಕೊಡಲಾಗಿದೆ. ಹೊಸದಾಗಿ ತನಿಖೆ ನಡೆಯಲಿದೆ. ತೃಶೂರ್ ರೇಂಜ್ ಐಜಿ ಎಂಆರ್ ಅಜಿತ್ ಕುಮಾರ್ ತನಿಖೆಯ ಮೇಲ್ನೋಟ ವಹಿಸಲಿದ್ದಾರೆ.
ಸಿಪಿಎಂ ಕೌನ್ಸಿಲರ್ ಸಹಿತ ಪತಿಯ ಗೆಳೆಯರು ತನ್ನನ್ನು ಎರಡುವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರ ಗುರಿಪಡಿಸಿರುವುದನ್ನು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ರೇಂಜ್ ಐಜಿಯ ನೇತೃತ್ವದಲ್ಲಿ ಪೊಲೀಸರು ಸಭೆ ನಡೆಸಿದ್ದು, ಪೊಲೀಸರಿಂದಾದ ನಿರ್ಲಕ್ಷ್ಯವನ್ನು ಸಭೆಯಲ್ಲಿ ಬೆಟ್ಟು ಮಾಡಲಾಗಿದೆ ಎಂದು ವರದಿ ತಿಳಿಸಿದೆ. ತೃಶೂರ್ ನಿವಾಸಿಯಾದ ಗೃಹಿಣಿಯೊಬ್ಬರು ಡಬ್ಬಿಂಗ್ ಆರ್ಟಿಸ್ಟ್ ಭಾಗ್ಯಲಕ್ಷ್ಮಿ ಚಲನಚಿತ್ರ ನಟಿ ಪಾರ್ವತಿಮತ್ತು ತನ್ನ ಪತಿಯ ಜೊತೆ ತಿರುವನಂತಪುರದಲ್ಲಿ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಎರಡು ವರ್ಷಗಳ ಹಿಂದೆತನ್ನ ಮೇಲೆ ನಡೆದ ಕೃತ್ಯವನ್ನು ಬಹಿರಂಗಪಡಿಸಿದ್ದರು. ಈ ಪ್ರಕರಣವೀಗ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಮಾತ್ರವಲ್ಲ ನಂತರ ಡಿಜಿಪಿ ಲೋಕನಾಥ್ ಬೆಹ್ರಾರಿಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರಿಗೂ ಗೃಹಿಣಿ ಮತ್ತು ಆಕೆಯ ಪತಿ ದೂರು ನೀಡಿದ್ದಾರೆ. ಸಿಪಿಎಂ ವಡಂಕಚೇರಿ ನಗರಸಭಾ ಕೌನ್ಸಿಲರ್ ಜಯಂತನ್(28) ಆತನ ಸಹೋದರ ಜನೀಷ್(26) ಗೆಳೆಯರಾದ ಬಿನೀಷ್(25) ಶಿಬಿ(27) ವಿರುದ್ಧ ಸಾಮೂಹಿಕ ಅತ್ಯಾಚಾರ ನಡೆಸಿರುವುದಾಗಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಪತಿಯ ಗೆಳೆಯರಾದ ನಾಲ್ಕು ಮಂದಿ 2014 ಮಾರ್ಚ್ನಲ್ಲಿ ಪತಿ ಡಿಅಡಿಕ್ಷನ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಪತಿಯ ಬಳಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಯಾರೂ ಇಲ್ಲದ ಮನೆಯೊಂದಕ್ಕೆ ಕರೆತಂದು ನಾಲ್ಕುಮಂದಿ ಸಾಮೂಹಿಕ ಅತ್ಯಾಚಾರ ವೆಸಗಿದ್ದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಅತ್ಯಾಚಾರವೆಸಗುವ ದೃಶ್ಯವನ್ನು ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿದ್ದಾರೆ. ವಿಷಯವನ್ನು ಹೊರಗೆ ಯಾರಲ್ಲಾದರೂಹೇಳಿದರೆ ಮಕ್ಕಳನ್ನು ಕೊಂದುಹಾಕುವುದಾಗಿ ಬೆದರಿಸಿದ್ದರು.
ಆದ್ದರಿಂದ ದೂರು ನೀಡಲು ಹಿಂಜರಿದಿದ್ದೆ. ಆದರೆ ಮಾನಸಿಕ ಕ್ಷೇಶ ತಡೆಯಲಾಗದೆ ದೂರು ನೀಡಿದೆಆದರೆ ಕೇಸು ತನಿಖೆ ನಡೆಸಿದ ಪೇರಮಂಗಳಂ ಸಿಐ ತುಂಬ ಕೆಟ್ಟದಾಗಿ ವರ್ತಿಸಿದರು. ಮೂರುದಿವಸ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಠಾಣೆಯಲ್ಲಿ ಕೂಡಿಹಾಕಿದರು. ಕೆಲವು ಪೊಲೀಸರು ನಾಯಿಗಳೊಂದಿಗೆ ವ್ಯವಹರಿಸುವಂತೆ ವರ್ತಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರೆಂದು ವರದಿತಿಳಿಸಿದೆ.