ಪಾಕಿಸ್ತಾನದಿಂದ ನಿರಂತರ ಗುಂಡುದಾಳಿ : ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಬಾಸ್ಮತಿ ಕಟಾವಿಗೆ ರೈತರ ಪ್ರಾಣ ಒತ್ತೆ
ಸಂಬಾ, ಸ.7: ಗಡಿಯಾಚೆಯಿಂದ ಪಾಕಿಸ್ತಾನಿ ರೇಂಜರ್ಸ್ನ ಅವ್ಯಾಹತ ಗುಂಡು ದಾಳಿಯಿಂದಾಗಿ ಆರ್.ಎಸ್.ಪುರದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಸುಗಂಧಿತ ಬಾಸ್ಮತಿ ಅಕ್ಕಿಯ ಕಟಾವು ರೈತರಿಗೆ ಭಾರೀ ಸವಾಲಿನದಾಗಿದೆ.
ಆರ್.ಎಸ್.ಪುರ ವಲಯ ಹೆಚ್ಚಿನ ಪ್ರದೇಶ ಫಲವತ್ತಾಗಿದ್ದು, ಬಾಸ್ಮತಿ ಬೆಳೆಗೆ ಆದರ್ಶವಾಗಿದೆ. ಪಾಕಿಸ್ತಾನಿ ರೇಂಜರ್ಸ್ನ ಕದನ ವಿರಾಮ ಉ್ಲಂಘನೆಯಿಂದಾಗಿ ಒಟ್ಟು 17,742 ಹೆಕ್ಟೇರ್ಗಳಲ್ಲಿ ಬೆಳೆದು ನಿಂತಿರುವ ಭತ್ತದ ಪೈರಿಗೆ ಹಾನಿಯಾಗಿದೆ.
ಈ ಪ್ರದೇಶದಲ್ಲಿ ಬೆಳೆದಿರುವ ಭತ್ತ ರೂ.130 ಕೋಟಿ ಬೆಲೆ ಬಾಳುತ್ತದೆ. ಜಮ್ಮು-ಕಾಶ್ಮೀರದಲ್ಲಿ ಬೆಳೆದು ನಿಂತಿರುವ ಬಾಸ್ಮತಿ ಅಕ್ಕಿಯೀಗ ಪಾಕಿಸ್ತಾನದ ಬೆದರಿಕೆಗೊಳಗಾಗಿದೆ. ಕಟಾವಿಗೆ ಅಲ್ಲಿ ಯಾರೂ ಇರದಿದ್ದಲ್ಲಿ 15 ದಿನಗಳೊಳಗಾಗಿ ಬೆಳೆ ಸಾಯಲಿದೆಯೆಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳೆ ಕೈಗೆ ವಂದಿದ್ದು, ರೈತರೀಗ ಅದರ ಕೊಯ್ಲಿಗೆ ಜೀವವನ್ನೇ ಅಪಾಯಕ್ಕೊಡ್ಡುತ್ತಿದ್ದಾರೆ. 54ರ ಹರೆಯದ ಶ್ಯಾರಿಲಾಲ್ ಎಂಬ ರೈತ ತನ್ನ ಕೆಲವು ಕುಟುಂಬ ಸದಸ್ಯರೊಂದಿಗೆ ಜಮ್ಮ ಜಿಲ್ಲೆಯ ಆರ್.ಎಸ್.ಪುರ ಗಡಿ ವಲಯದ ಅಂತಾರಾಷ್ಟ್ರೀಯ ಗಡಿಗೆ ಸಮೀಪ ಬೆಳೆದು ನಿಂತಿರುವ ಭತ್ತದ ಕಟಾವಿಗೆ ಧಾವಿಸಿದ್ದಾನೆ.
ತಾವು ಅಸಹಾಯಕರಾಗಿದ್ದೇವೆ. ತಮ್ಮ ಬೆಳೆಯನ್ನು ಕಳೆದುಕೊಳ್ಳಲಾರೆವು. ತಮ್ಮ ಕುಟುಂಬಕ್ಕೆ ಅದೇ ಆಧಾರ. ತಾವು ಬೆಳೆ ಕಟಾವಿಗಾಗಿ ಜೀವವನ್ನೇ ಒತ್ತೆಯಿಡುತ್ತಿದ್ದೇವೆಂದು ಲಾಲ್ ಹೇಳಿದ್ದಾನೆ.ಆತನಂತೆಯೇ, ಗಡಿ ಭಾಗದಲ್ಲಿ ಹೊಲಗಳಿರುವ ರೈತರು ತುರ್ತಾಗಿ ಬೆಳೆ ಕಟಾವು ಮಾಡಲು ಸಮಯ ಮೀರಿ ಕೆಲಸ ಮಾಡುತ್ತಿದ್ದಾರೆ.