ಹಿರಿಯ ಪತ್ರಕರ್ತ ಗಿರೀಶ್ ನಿಕಂ ಇನ್ನಿಲ್ಲ
ಹೊಸದಿಲ್ಲಿ, ನ.8: ಹಿರಿಯ ಪತ್ರಕರ್ತ ಹಾಗೂ ಟಿವಿ ನಿರೂಪಕ ಗಿರೀಶ್ ನಿಕಂ ಸೋಮವಾರ ತೀವ್ರ ಹೃದಯಾಘಾತದಿಂದ ನಿಧನರಾದರು.
ಅವರಿಗೆ 59 ವರ್ಷ ವಯಸ್ಸಾಗಿತ್ತು. ಟಿವಿ ಸ್ಟುಡಿಯೊದಲ್ಲಿ ಕಾರ್ಯಕ್ರಮವೊಂದರ ಶೂಟಿಂಗ್ ಮುಗಿಸಿದಾಗ ಎದೆನೋವು ಕಾಣಿಸಿಕೊಂಡಿತು. ತಕ್ಷಣ ಅವರನ್ನು ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು.
ಗಿರೀಶ್ ನಿಕಂ ಅವರು ಮೈಸೂರಿನ ’ಸ್ಟಾರ್ ಆಫ್ ಮೈಸೂರು’ ಪತ್ರಿಕೆಯಿಂದ ವೃತ್ತಿಬದುಕು ಆರಂಭಿಸಿದ್ದರು. ಬಳಿಕ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಸೇರಿದ್ದರು. ಇಂಡಿಯಾ ಟುಡೇ, ಡೆಕ್ಕನ್ ಕ್ರಾನಿಕಲ್, ನ್ಯೂಸ್ ಟುಡೇ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಅವರು ರಾಜ್ಯಸಭೆ ಟಿವಿಗೆ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.
ನಿಕಂ ಅವರ ದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಬೆಂಗಳೂರಿಗೆ ಒಯ್ಯಲಾಗುವುದು ಎಂದು ಕುಟುಂಬದ ಮೂಲಗಳು ಹೇಳಿವೆ. ನಿಕಂ ನಿಧನಕ್ಕೆ ಪ್ರಸಾರ ಭಾರತಿ ಅಧ್ಯಕ್ಷ ಎ.ಸೂರ್ಯಪ್ರಕಾಶ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
Next Story