ಬುಡಕಟ್ಟು ವ್ಯಕ್ತಿಯ ಕೊಲೆ : ದಿಲ್ಲಿ ವಿವಿ ಪ್ರಾಧ್ಯಾಪಕಿ ನಂದಿನಿ ವಿರುದ್ಧ ಪ್ರಕರಣ
ರಾಯಪುರ್, ನ.8: ಸುಕ್ಮಾ ಜಿಲ್ಲೆಯಲ್ಲಿ ಶಂಕಿತ ಮಾವೋವಾದಿಗಳಿಂದ ಹತ್ಯೆಗೀಡಾದ ಆದಿವಾಸಿಯೊಬ್ಬನ ಪ್ರಕರಣ ಸಂಬಂಧ ಛತ್ತೀಸ್ಗಢ ಪೊಲೀಸರು ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ನಂದಿನಿ ಸುಂದರ್ ಹಾಗೂ 10 ಮಂದಿ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಸಂತ್ರಸ್ತನ ಪತ್ನಿ ದಾಖಲಿಸಿದ ದೂರಿನನ್ವಯ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 120ಬಿ, 302 ಹಾಗೂ 147,148, 149 ಅನ್ವಯ ಪ್ರಕರಣ ದಾಖಲಿಸಲಾಗಿದೆ. ಕುಮಕೊಲೆಂಗ್ ಪಂಚಾಯತಿನ ನಮ ಗ್ರಾಮದ ನಿವಾಸಿ ಬಘೆಲ್ ಎಂಬವನನ್ನು ಶಂಕಿತ ಮಾವೋವಾದಿಗಳು ಶನಿವಾರ ಕೊಂದಿದ್ದರು. ಬಘೆಲ್ ಹಾಗೂ ಇತರ ಗ್ರಾಮಸ್ಥರು ಮೇ ತಿಂಗಳಲ್ಲಿ ನಂದಿನಿ ಸುಂದರ್, ಜೆಎನ್ ಯು ಪ್ರೊಫೆಸರ್ ಅರ್ಚನಾ ಪ್ರಸಾದ್, ದಿಲ್ಲಿಯ ಜೋಷಿ ಅಧಿಕಾರ್ ಸಂಸ್ಥಾನ್ ಇಲ್ಲಿನ ವಿನೀತ್ ತಿವಾರಿ, ಛತ್ತೀಸಗಢ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಸಂಜಯ್ ಪರಾಟೆ ಹಾಗೂ ಸುಕ್ಮಾದ ಮಹಿಳಾ ಕಾರ್ಯಕರ್ತೆಯೊಬ್ಬರ ವಿರುದ್ಧ ದೂರು ನೀಡಿದ್ದರಲ್ಲದೆ, ಅವರ ವಿರುದ್ಧ ಆದಿವಾಸಿಗಳನ್ನು ಪ್ರಚೋದನೆಗೈದ ಆರೋಪ ಹೊರಿಸಿದ್ದರು.
ಕುಮಕೊಲೆಂಗ್ ಗ್ರಾಮದ ಹಾಗೂ ನೆರೆಯ ನಮ ಇಲ್ಲಿನ ಯುವಕರು ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಮಾವೋವಾದಿ ಚಟುವಟಿಕೆಗಳ ವಿರುದ್ಧ ಆಂದೋಲನ ಹಮ್ಮಿಕೊಂಡಿದ್ದರು. ಮಾವೋವಾದಿಗಳ ವಿರುದ್ಧ ಹೋರಾಡಲು ಅವರು ಸ್ಥಳೀಯವಾಗಿ ಒಂದು ಸುರಕ್ಷಾ ಗುಂಪನ್ನೂ ರಚಿಸಿದ್ದರು. ಮಾವೋವಾದಿಗಳನ್ನು ವಿರೋಧಿಸದಂತೆ ನಂದಿನಿ ಮತ್ತಿತರ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.