ದುನಿಯಾ ವಿಜಯ್ ವಿರುದ್ಧ ಹಲ್ಲೆ ಆರೋಪ..!
ಬೆಂಗಳೂರು, ನ.15: ಮಾಸ್ತಿ ಗುಡಿ ಚಿತ್ರದ ಶೂಟಿಂಗ್ ವೇಳೆ ಹೆಲಿಕಾಪ್ಟರ್ನಿಂದ ಕೆಳಕ್ಕೆ ಹಾರಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದ ಚಿತ್ರ ನಟ ದುನಿಯಾ ವಿಜಯ್ ವಿರುದ್ಧ ಹಲ್ಲೆ ಆರೋಪ ದಾಖಲಾಗುವುದರೊಂದಿಗೆ ಮತ್ತೆ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ.
ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ.ಗೌಡ ಅವರ ಸಹೋದರ ಶಂಕರ್ ನ ಮಾವ ಜಯರಾಮ್ ಮೇಲೆ ಕೆನ್ನೆಗೆ ಹೊಡೆದು, ಎದೆಗೆ ಗುದ್ದಿದ ಆರೋಪ ಎದುರಿಸುತ್ತಿದ್ದಾರೆ.
ಇಂದು ಬೆಳಗ್ಗೆ ಶಂಕರ್ ಅವರ ಮಾವ ಜಯರಾಮ್ ಅವರು ಬ್ಯಾಂಕ್ ನ ವ್ಯವಹಾರ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳಲು ಶಂಕರ್ ನ ಮನೆಗೆ ತೆರಳಿದ್ದ ವೇಳೆ ದುನಿಯಾ ವಿಜಯಾ ಹಲ್ಲೆ ನಡೆಸಿರುವುದಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಜಯರಾಮ್ ಆರೋಪಿಸಿ ಚೆನ್ನಮ್ಮನಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಶಂಕರ್ ಮತ್ತು ಜಯರಾಮ್ ಪುತ್ರಿ ಮಾನಸ ಅವರ ವಿವಾಹ ಮೂರು ತಿಂಗಳ ಹಿಂದೆ ಆಗಿತ್ತು. ಜಯರಾಮ್ ಮಗಳನ್ನು ಕರೆದುಕೊಂಡು ಬರಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಜಯರಾಮ್ ಪುತ್ರಿ ಮಾನಸ ಶಂಕರ್ ಅವರು" ತಂದೆ ಜಯರಾಮ್ ಮೇಲೆ ಹಲ್ಲೆ ನಡೆದಿಲ್ಲ.ಇದು ಕುಟುಂಬದ ವಿಚಾರ ದೊಡ್ಡದು ಮಾಡ್ಬೇಡಿ.ಸರಿ ಮಾಡಿಕೊಳ್ಳುತ್ತೇವೆ. ನೀಡಿರುವ ದೂರನ್ನು ವಾಪಸ್ ತೆಗದುಕೊಳ್ಳುತ್ತೇವೆ ” ಎಂದು ಟಿವಿ ಚಾನಲೊಂದಕ್ಕೆ ತಿಳಿಸಿದ್ದಾರೆ.
"ದುನಿಯಾ ವಿಜಯ್ ನಮ್ಮ ಕುಟುಂಬದ ಸದಸ್ಯರಂತೆ ಇದ್ದಾರೆ. ಅವರು ಹಲ್ಲೆ ಮಾಡಿಲ್ಲ. ಗಲಾಟೆ ನಡೆಯುತ್ತಿದ್ದ ವೇಳೆ ಬುದ್ಧಿ ಹೇಳುವುದಕ್ಕೆ ಬಂದಿದ್ದರು” ಎಂದು ಶಂಕರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
"ಜಯರಾಮ್ ಮೇಲೆ ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ. ನಾವೆಲ್ಲರೂ ಒಂದೇ ಕುಟುಂಬದವರಿದ್ದಂತೆ ''ಎಂದು ದುನಿಯಾ ವಿಜಯ್ ಹೆಳಿದ್ದಾರೆ.