ಯುಎಪಿಎ: ಆದಿವಾಸಿ ಯುವತಿಗೆ ಕೊನೆಗೂ ಜಾಮೀನು
ಕಲ್ಪಟ್ಟ, ನ. 24: ಯುಎಪಿಎ ಕಾನೂನು ಹೇರಲಾಗಿದ್ದ ಪ್ರಕರಣದಲ್ಲಿ ಜಾಮೀನು ಲಭಿಸದೆ ಆರುತಿಂಗಳಿನಿಂದ ಜೈಲಲ್ಲಿದ್ದ ಆದಿವಾಸಿ ಯುವತಿ ಗೌರಿ ಎಂಬವರಿಗೆ ಕೊನೆಗೂ ಜಾಮೀನು ಲಭಿಸಿದೆ ಎಂದು ವರದಿಯಾಗಿದೆ. ವಿಧಾನಸಭಾ ಚುನಾವಣೆ ಬಹಿಷ್ಕಾರಕ್ಕೆ ಪೋಸ್ಟರ್ ಅಂಟಿಸಿದ್ದಕ್ಕಾಗಿ ಗೌರಿವಿರುದ್ಧ ಯುಎಪಿಯ ಅಡಿಯಲ್ಲಿ ಕ್ರಮಕೈಗೊಳ್ಳಲಾಗಿತ್ತು. ತತ್ಪರಿಣಾಮವಾಗಿ ಗೌರಿ, ಹಾಗೂ ವಯನಾಡಿನ ಚಾತ್ತು ಎಂಬವರಿಗೂ ಜಾಮೀನು ನಿರಾಕರಿಸಲಾಗಿತ್ತು.
ಈಗ ಜಿಲ್ಲಾ ಕೋರ್ಟ್ ನಿಂದ ಇಬ್ಬರಿಗೂ ಜಾಮೀನು ಲಭಿಸಿದ್ದು, ಗುರುವಾರ ಇಬ್ಬರೂ ಜೈಲಿನಿಂದ ಹೊರಬರಲಿದ್ದಾರೆಂದು ಹೇಳಲಾಗಿದೆ. ಸಮಾನಪ್ರಕರಣದಲ್ಲಿ ಯುಎಪಿಯನ್ನು ಹೇರಲಾದ ಹತ್ತುಮಂದಿಗೆ ಈ ಹಿಂದೆ ಜಾಮೀನು ನೀಡಲಾಗಿತ್ತು. ಆದರೆ ಹೋರಾಟದ ಪ್ರಾಯೋಜಕರಾದ ಗೌರಿ ಮತ್ತು ಚಾತುಗೆ ಜಾಮೀನು ಲಭಿಸಿರಲಿಲ್ಲ. ಪೆರಿಂದಲ್ಮಣ್ಣ ಅಶ್ರಫ್ ಎಂಬವರು ಗೌರಿಯ ಪತಿಯಾಗಿದ್ದು, ಗೌರಿಯ ಬಂಧನದಿಂದಾಗಿ ಕಳೆದ ಆರುತಿಂಗಳಿಂದ ಅಶ್ರಫ್-ಗೌರಿ ದಂಪತಿಯ ನಾಲ್ಕು ವರ್ಷದ ಮಗು ಆಶಿಕ್ ತಾಯಿಯ ಅನುಪಸ್ಥಿತಿಯಲ್ಲಿ ಇರಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿತ್ತು ಎಂದು ವರದಿ ತಿಳಿಸಿದೆ.