ನನಗೆ ಚುನಾವಣೆಗಳು ಮುಖ್ಯವಲ್ಲ, ರೈತರ ಏಳಿಗೆ ಮುಖ್ಯ: ಪ್ರಧಾನಿ ಮೋದಿ
ಹೊಸದಿಲ್ಲಿ,ನ.25: ತನಗೆ ಚುನಾವಣೆಗಳು ಮುಖ್ಯವಲ್ಲ,ರೈತರ ಏಳಿಗೆಯ ಬಗ್ಗೆ ಅದಕ್ಕಿಂತ ಹೆಚ್ಚಿನ ಕಾಳಜಿ ಹೊಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೇಳಿದರು.
ವಿಧಾನಸಭಾ ಚುನಾವಣೆ ಸನ್ನಿಹಿತವಾಗಿರುವ ಪಂಜಾಬಿನ ಬಠಿಂಡಾದಲ್ಲಿ ರ್ಯಾಲಿ ಯೊಂದನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಭ್ರಷ್ಟಾಚಾರ ಮತ್ತು ಕಪ್ಪುಹಣ ಮಧ್ಯಮ ವರ್ಗ ಮತ್ತು ಶೋಷಿತರನ್ನು ತಮ್ಮ ಹಕ್ಕುಗಳಿಂದ ವಂಚಿಸಿವೆ ಮತ್ತು ಗೆದ್ದಲು ಹುಳಗಳಂತೆ ದೇಶಕ್ಕೆ ಹಾನಿಯನ್ನುಂಟು ಮಾಡುತ್ತಿವೆ ಎಂದರು. ನೋಟು ನಿಷೇಧದ ಸರಕಾರದ ದಿಢೀರ್ ಕ್ರಮದಿಂದಾಗಿ ಅನಾನುಕೂಲವನ್ನು ಅನುಭವಿಸುತ್ತಿದ್ದರೂ ತನ್ನ ಬೆಂಬಲಕ್ಕೆ ನಿಂತಿರುವುದಕ್ಕಾಗಿ ಜನತೆಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿದರು.
ಮಧ್ಯಮ ವರ್ಗಗಳ ಶೋಷಣೆಯನ್ನು ತಡೆಯಲು ಮತ್ತು ಬಡವರು ತಮ್ಮ ಎಲ್ಲ ಹಕ್ಕುಗಳನ್ನು ಪಡೆಯುವಂತಾಗಲು ತಾನು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದರು.
ದೈನಂದಿನ ವ್ಯವಹಾರಗಳಲ್ಲಿ ಪಾವತಿಗೆ ನಗದು ಹಣದ ಬದಲಿಗೆ ತಮ್ಮ ಮೊಬೈಲ್ ಫೋನ್ಗಳನ್ನು ಬಳಸುವಂತೆ ಅವರು ಈ ಸಂದರ್ಭ ಜನರನ್ನು ಉತ್ತೇಜಿಸಿದರು.