ಸಿಬ್ಬಂದಿಯಿಂದ ಕಿರುಕುಳಮಹಿಳಾ ಐಪಿಎಸ್ ಅಧಿಕಾರಿ ಅಳಲು
ತಿರುವನಂತಪುರ, , ಫೆ.1: ಮೂರು ದಶಕಗಳಿಂದ ಸಹೋದ್ಯೋಗಿಯೊಬ್ಬರು ಕಿರುಕುಳ ನೀಡುತ್ತಿದ್ದಾರೆ ಎಂದು ಕೇರಳದ ಹಿರಿಯ ಐಪಿಎಸ್ ಅಧಿಕಾರಿಣಿ ಆರೋಪಿಸಿರುವುದು ಹೊಸ ವಿವಾದ ಹುಟ್ಟುಹಾಕಿದೆ.
ಮತ್ತೊಬ್ಬ ಐಪಿಎಸ್ ಅಧಿಕಾರಿ ಹಾಗೂ ರಾಜ್ಯದ ಸಾರಿಗೆ ಆಯುಕ್ತ ತೊಮಿನ್ ಜೆ.ತಚಂಕರಿ ಅವರು 29 ವರ್ಷಗಳಿಂದ ಕಿರುಕುಳ ನೀಡುತ್ತಿದ್ದಾರೆ. ನಾಗರಿಕ ಸೇವಾ ತರಬೇತಿ ಅವಧಿಯಿಂದಲೂ ಕಿರುಕುಳ ನೀಡಲಾಗುತ್ತಿದೆ ಎಂದು ಎಡಿಜಿಪಿ ಆರ್. ಶ್ರೀ ಲೇಖಾ ಫೇಸ್ಬುಕ್ನಲ್ಲಿ ಅಳಲು ತೋಡಿಕೊಂಡಿದ್ದಾರೆ. ತೊಮಿನ್ ಇದನ್ನು ನಿರಾಕರಿಸಿದ್ದಾರೆ.
ರಾಜ್ಯದ ಅಪರಾಧ ದಾಖಲೆಗಳ ಬ್ಯೂರೊ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲೇಖಾ, ವಿಚಕ್ಷಣಾ ನ್ಯಾಯಾಲಯ ತಮ್ಮ ವಿರುದ್ಧ ಇತ್ತೀಚೆಗೆ ವಿಚಾರಣೆ ಆರಂಭಿಸಲೂ ತಚಂಕರಿಯವರ ಹುನ್ನಾರ ಕಾರಣ ಎಂದು ಆಪಾದಿಸಿದ್ದಾರೆ. ಶ್ರೀ ಲೇಖಾ ಸಾರಿಗೆ ಆಯುಕ್ತರಾಗಿದ್ದ ವೇಳೆ ಶಾಲಾ ಬಸ್ಸುಗಳಿಗೆ ಅನುಮತಿ ನೀಡಿಕೆಯಲ್ಲಿ ಸರಕಾರಕ್ಕೆ ಭಾರೀ ಪ್ರಮಾಣದ ನಷ್ಟವಾಗಿದೆ ಎಂಬ ಆರೋಪದ ಬಗ್ಗೆ ವಿಚಕ್ಷಣಾ ನ್ಯಾಯಾಲಯ ತನಿಖೆ ನಡೆಸುತ್ತಿದೆ. ತಮಗೆ ನ್ಯಾಯಬದ್ಧವಾಗಿ ಸಲ್ಲಬೇಕಿರುವ ಭಡ್ತಿಯನ್ನು ತಡೆಲು ಈ ಹುನ್ನಾರ ನಡೆಸಿದ್ದಾರೆ ಎಂದು ಶ್ರೀ ಲೇಖಾ ಆಪಾದಿಸಿದ್ದಾರೆ.
ಈ ಬಗ್ಗೆ ಅವರನ್ನು ಸಂಪರ್ಕಿಸಿದಾಗ, ಫೇಸ್ಬುಕ್ನ ವೈಯಕ್ತಿಕ ಖಾತೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇದಕ್ಕೆ ಬದ್ಧವಾಗಿರುವುದಾಗಿ ಅವರು ಸ್ಪಷ್ಟಪಡಿಸಿದರು.